ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರಕ್ಕೆ ಎನ್.ಶಶಿಕುಮಾರ್ ಅವರು ಪೊಲೀಸ್ ಆಯುಕ್ತರಾಗಿ ನೇಮಕಗೊಂಡು ಬಂದ ನಂತರ ಬೇರೆ ಬೇರೆ
ರೀತಿಯ ಸಭೆಗಳನ್ನು ನಡೆಸಿ ಕೆಲವೊಂದಿಷ್ಟು
ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಡ್ರಗ್ಸ್ ವ್ಯಸನಿಗಳು, ಡ್ರಗ್ಸ್ ಪೆಡ್ಲರ್‌ಗಳು, ಗಾಂಜಾ ಪೆಡ್ಲರ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಮದ್ಯ ಸೇವಿಸುವವರು, ರೌಡಿ ಶೀಟರ್‌ಗಳು ಸೇರಿದಂತೆ ಇತ್ಯಾದಿ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರನ್ನು
ಹಂತ ಹಂತವಾಗಿ ಕರೆಯಿಸಿ ಅವರಿಗೆ ಖಡಕ್ ಸೂಚನೆ
ಕೊಡುತ್ತಿದ್ದಾರೆ.

ಅವಳಿನಗರದಲ್ಲಿ ಅಪರಾಧ ಕೃತ್ಯಗಳು ನಡೆಯದಂತೆ ಕ್ರಮವಹಿಸಿರುವ ಪೊಲೀಸ್ ಆಯುಕ್ತ ಶಶಿಕುಮಾರ ಅವರು, ಇದೀಗ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವ್ಯಸನಿಗಳಾಗದಂತೆ ಹಾಗೂ ಕಾಲೇಜು ಕ್ಯಾಂಪಸ್‌ಗಳು ವ್ಯಸನ ಮುಕ್ತವಾಗಬೇಕು ಎಂದು ಧಾರವಾಡದ ಜೆಎಸ್ಎಸ್ ಉತ್ಸವ ಸಭಾಭವನದಲ್ಲಿ ಕಾಲೇಜುಗಳಲ್ಲಿ ಸುರಕ್ಷತೆ ಮತ್ತು ಮಾದಕ ವಸ್ತುಗಳ ನಿಯಂತ್ರಣ ಕುರಿತು ಎಲ್ಲ ಕಾಲೇಜುಗಳ ಸಿಬ್ಬಂದಿ ಜೊತೆ ಸಭೆ ನಡೆಸಿದರು.

ಅನೇಕ ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿ ತಮ್ಮ ಕಾಲೇಜು ಕ್ಯಾಂಪಸ್‌ನಲ್ಲಾಗುತ್ತಿರುವ ಸಮಸ್ಯೆ, ಏನೇನು ಕ್ರಮ ಕೈಗೊಳ್ಳಬೇಕು? ಪೊಲೀಸರನ್ನು ಯಾವ ರೀತಿ ಸಂಪರ್ಕಿಸಬೇಕು? ಎಂಬ ಕುರಿತು ಪ್ರಶ್ನೆಗಳನ್ನು ಕೇಳಿ ತಮಗಿದ್ದ ಸಂದೇಹಗಳನ್ನು ಬಗೆಹರಿಸಿಕೊಂಡರು.

ಅಲ್ಲದೇ ಕೆಲವರು ಎಲ್ಲೆಲ್ಲಿ ಏನೇನು ಸಮಸ್ಯೆಯಾಗುತ್ತಿದೆ ಎಂಬುದನ್ನೂ ಪೊಲೀಸ್ ಆಯುಕ್ತರ ಗಮನಕ್ಕೆ ತಂದರು. ಪೊಲೀಸ್ ಬೀಟ್ ಹೆಚ್ಚಿಸುವ ವ್ಯವಸ್ಥೆ, ಚಾಲುಕ್ಯ ವಾಹನಗಳ ಹೆಚ್ಚು ಓಡಾಟ, ಸಿಸಿ ಟಿವಿ ಕ್ಯಾಮೆರಾಗಳ ಹೆಚ್ಚು ಅಳವಡಿಕೆ ಕುರಿತು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದರು.

ಒಟ್ಟಾರೆ ಎನ್.ಶಶಿಕುಮಾರ್ ಅವರು ಪೊಲೀಸ್ ಆಯುಕ್ತರಾಗಿ ಬಂದ ಮೇಲೆ ಅವಳಿನಗರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರ ಹಾಗೂ ಕ್ರಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವುದಂತೂ ಸುಳ್ಳಲ್ಲ.

Leave a Reply

Your email address will not be published. Required fields are marked *

Latest News