Bihar crime: ಪ್ರೀತಿಸುತ್ತಿದ್ದ ಯುವತಿಯನ್ನೇ ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ ಪ್ರಿಯಕರ!

Bihar crime: ಪ್ರೀತಿಸುತ್ತಿದ್ದ ಯುವತಿಯನ್ನೇ ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ ಪ್ರಿಯಕರ!

ಬಿಹಾರದಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನೇ ಚಲಿಸುತ್ತಿದ್ದ ರೈಲಿನಿಂದ ದೂಡಿ ಹತ್ಯೆಗೆ ಯತ್ನಿಸಿದ್ದಾನೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಳಂದಾ: ಅದು ಎಂಥದ್ದೇ ಪ್ರಸಂಗ ಬಂದರೂ ಪ್ರಾಣಕ್ಕೆ ಪ್ರಾಣ ಕೊಟ್ಟು ಕಾಪಾಡ್ತೀನಿ ಅನ್ನೋದು ನಿಜವಾದ ಪ್ರೀತಿ.

ಅದೆಷ್ಟೋ ಜನ ತಮ್ಮನ್ನು ಪ್ರೀತಿಸಿದವರಿಗೋಸ್ಕರ ಜೀವವನ್ನೇ ಅರ್ಪಿಸಿದವರುಂಟು. ಆದರೆ, ಇಲ್ಲೊಬ್ಬ ನಾಲಾಯಕ್​ ಪ್ರೇಮಿ, ತಾನು ಪ್ರೀತಿಸಿದ ಹುಡುಗಿಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ಬಿಹಾರದ ನಳಂದಾದ ಭಾಗನ್ ಬಿಘಾ ರೈಲು ನಿಲ್ದಾಣದ ಬಳಿ ಈ ವಿದ್ಯಮಾನ ಬೆಳಕಿಗೆ ಬಂದಿದೆ. ರೈಲಿನಿಂದ ತಳ್ಳಲ್ಪಟ್ಟ ಯುವತಿ ಅದೃಷ್ಟವಶಾತ್​ ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ರೈಲು ಕಂಬಿ ಪಕ್ಕ ಬಿದ್ದಿದ್ದ ಆಕೆಯನ್ನು ಕಂಡವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.

ಘಟನೆಯ ವಿವರ: ಪಾಟ್ನಾ ಮೂಲದ ನಿವಾಸಿಗಳಾದ ಯುವತಿ ಮತ್ತು ಆರೋಪಿ ಮಣಿಕುಮಾರ್​ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ನೆರೆಹೊರೆಯವರಾಗಿದ್ದರು. ಇಬ್ಬರೂ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಮದುವೆಯಾಗುವ ಉದ್ದೇಶದಿಂದ ಇಬ್ಬರೂ ಕೆಲ ದಿನಗಳ ಹಿಂದೆ ಹರಿಯಾಣಕ್ಕೆ ಓಡಿ ಹೋಗಿದ್ದರು. ಈ ವಿಷಯ ಬಾಲಕಿಯ ಕುಟುಂಬಸ್ಥರಿಗೆ ತಿಳಿದಾಗ ಬಾಲಕನ ಮನೆಯವರೊಂದಿಗೆ ಮಾತನಾಡಿ ಮದುವೆಗೆ ಒಪ್ಪಿಗೆ ನೀಡಿದ್ದರು. ಈ ಬಗ್ಗೆ ಗ್ರಾಮದಲ್ಲಿ ಪಂಚಾಯಿತಿ ಕೂಡ ನಡೆಸಲಾಗಿತ್ತು.

ಇದಾದ ಬಳಿಕ ಮಣಿಕುಮಾರ್ ಯುವತಿಯನ್ನು ರಾಜಗಿರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಇಬ್ಬರ ನಡುವೆ ಯಾವುದೋ ಕಾರಣಕ್ಕಾಗಿ ಮನಸ್ತಾಪ ಉಂಟಾಗಿದೆ. ಈ ವೇಳೆ, ಮಣಿಕುಮಾರ್​ ಯುವತಿಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ರೈಲ್ವೇ ಹಳಿ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿ: ರೈಲಿನಿಂದ ತಳ್ಳಲ್ಪಟ್ಟ ಯುವತಿ, ರೈಲ್ವೆ ಹಳಿಗಳ ಮೇಲೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಕಂಡವರು 112 ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ಷರೀಫ್ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆ ಮತ್ತು ದೇಹದ ವಿವಿಧೆಡೆ ಬಲವಾಗಿ ಪೆಟ್ಟು ಬಿದ್ದ ಕಾರಣ ಯುವತಿ ಪ್ರಜ್ಞೆ ಕಳೆದುಕೊಂಡಿದ್ದಳು. ಇದಾದ 2 ದಿನಗಳ ನಂತರ ಯುವತಿಗೆ ಪ್ರಜ್ಞೆ ಬಂದಾಗ ಸಂಬಂಧಿಕರಿಗೆ ನಡೆದ ವಿಷಯ ತಿಳಿಸಿದ್ದಾಳೆ. ಬಳಿಕ ಕುಟುಂಬಸ್ಥರು ಯುವತಿಯ ಹೇಳಿಕೆಯ ಮೇರೆಗೆ ದೂರು ನೀಡಿದ್ದಾರೆ.

ಘಟನೆ ಕುರಿತು ಸದರ್ ಡಿಎಸ್​ಪಿ ಡಾ.ಶಿಬ್ಲಿ ನೊಮಾನಿ ಮಾತನಾಡಿ, ಜೂನ್ 10ರಂದು ಭಾಗನ್ ಬಿಘಾ ರೈಲು ಹಳಿಗಳ ಮೇಲೆ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರೇಮ ಪ್ರಕರಣ ಇದಾಗಿದ್ದು, ಪ್ರೇಮಿಯೇ ಯುವತಿಯನ್ನು ರೈಲಿನಿಂದ ತಳ್ಳಿದ್ದಾನೆ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತೀವ್ರ ಗಾಯಗೊಂಡಿರುವ ಯುವತಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಪಾಟ್ನಾಗೆ ಕರೆದೊಯ್ದಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಸದರ್ ಡಿಎಸ್​ಪಿ ಶಿಬ್ಲಿ ನೊಮಾನಿ ತಿಳಿಸಿದರು.

Leave a Reply

Your email address will not be published. Required fields are marked *

Latest News