ಅಂಡರ್​ ಪಾಸ್​​ನಲ್ಲಿ ಮಳೆ ನೀರು ತುಂಬಿ ಯುವತಿ ಸಾವು ಪ್ರಕರಣ: ಕಾರಣ ಪತ್ತೆ ಹಚ್ಚಿದ ಲೋಕಾಯುಕ್ತ ತಂಡ, ಶೀಘ್ರದಲ್ಲೇ ವರದಿ ಸಲ್ಲಿಕೆ

ಅಂಡರ್​ ಪಾಸ್​​ನಲ್ಲಿ ಮಳೆ ನೀರು ತುಂಬಿ ಯುವತಿ ಸಾವು ಪ್ರಕರಣ: ಕಾರಣ ಪತ್ತೆ ಹಚ್ಚಿದ ಲೋಕಾಯುಕ್ತ ತಂಡ, ಶೀಘ್ರದಲ್ಲೇ ವರದಿ ಸಲ್ಲಿಕೆ

ಬೆಂಗಳೂರಲ್ಲಿ ಅಂಡರ್ ಪಾಸ್​ನಲ್ಲಿ ನಿಂತ ಮಳೆ ನೀರಲ್ಲಿ ಸಿಲುಕಿ ಯುವತಿ ಮೃತಪಟ್ಟ ಘಟನೆ ಸಂಬಂಧ ಲೋಕಾಯುಕ್ತ ಪೊಲೀಸರು ವರದಿ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಲೋಕಾಯುಕ್ತಕ್ಕೆ ಸಲ್ಲಿಸಲಿದ್ದಾರೆ.

ಬೆಂಗಳೂರು: ನಗರದ ಕೆ.ಆರ್.ಸರ್ಕಲ್ ಅಂಡರ್ ಪಾಸ್​​ನಲ್ಲಿ ಮಳೆ ನೀರಿಗೆ ಸಿಲುಕಿ ಮಹಿಳೆ ಮೃತಪಟ್ಟ ಪ್ರಕರಣ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ತನಿಖೆ ಮುಕ್ತಾಯಗೊಳಿಸಿದ್ದು, ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಕಳೆದ ಮೇ 21ರಂದು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆ.ಆರ್.ಸರ್ಕಲ್ ಅಂಡರ್ ಪಾಸ್​​ನಲ್ಲಿ ಸಿಲುಕಿದ್ದ ನಾಲ್ವರ ಪೈಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಮೃತಪಟ್ಟಿದ್ದರು. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಲೋಕಾಯುಕ್ತ ಐಜಿಪಿ ಸುಬ್ರಮಣ್ಯಶ್ವೇರರಾವ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಸಮಗ್ರ ತನಿಖೆ ಬಳಿಕ ಇದೀಗ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರಿಗೆ ಅಂತಿಮ ವರದಿ ನೀಡಲು ಸಿದ್ಧತೆ ನಡೆಸುತ್ತಿದೆ.

ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗಿದ್ದು, ಇನ್ನೊಂದು ವಾರದಲ್ಲಿ ವರದಿ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ. ಅಂಡರ್ ಪಾಸ್ ನೀಲನಕ್ಷೆ ಪರಿಶೀಲಿಸಿ, ಮಳೆ ನೀರು ತುಂಬಲು ಪ್ರಮುಖ ಪತ್ತೆ ಹಚ್ಚಿದ್ದಾರೆ. ಅಂಡರ್ ಪಾಸ್ ಎಂಟ್ರಿ ಹಾಗೂ ಎಕ್ಸಿಟ್ ಸ್ಥಳಗಳಲ್ಲಿ ಮಳೆ ನೀರು ಹೋಗದಿರುವುದು, ನೀರು ಹರಿಯಲು ಹಾಕಲಾಗಿರುವ ಕಂಬಿ ವ್ಯವಸ್ಥೆ ಸರಿಯಿಲ್ಲದಿರುವುದು, ಒಳಚರಂಡಿ ನಿರ್ವಹಣೆ ಮಾಡದಿರುವುದು, ಅವೈಜ್ಞಾನಿಕ ನಿರ್ಮಾಣ ಹಾಗೂ ಆರೇಳು ಅಡಿಗಿಂತಲೂ ಹೆಚ್ಚು ಮಳೆ ನೀರು ಅಂಡರ್ ಪಾಸ್​ನಲ್ಲಿ ತುಂಬಿದ್ದರೂ ಕಾರು ಚಾಲಕ ಗಮನಿಸದೇ ನಿರ್ಲಕ್ಷ್ಯ ತೋರಿರುವುದು ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ. ಅಂಡರ್ ಪಾಸ್ ನಿರ್ಮಾಣ, ನೀಲನಕ್ಷೆ ರೂಪಿಸಿದ ಇಂಜಿನಿಯರ್​ಗಳು ಹಾಗೂ ಟೆಂಡರ್ ಪಡೆದ ಕಂಪನಿ ಸೇರಿದಂತೆ ಹಲವು ಅಂಶಗಳ ವಿವರ ಸಂಗ್ರಹಿಸಿರುವ ಅಧಿಕಾರಿಗಳು, ಶೀಘ್ರದಲ್ಲೇ ವರದಿ ನೀಡಲಿದ್ದಾರೆ.

ಇತ್ತೀಚೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್, ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಗೆ ಕಾರಣವೇನು? ಏನೆಲ್ಲಾ ಸಮಸ್ಯೆ ಇತ್ತು ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಟ್ಯಾಂಕರ್ ತರಿಸಿ ನೀರು ಹರಿಸುವ ಮೂಲಕ ನೀರು ರಾಜಕಾಲುವೆಗೆ ಸರಾಗವಾಗಿ ಹರಿದು ಹೋಗುತ್ತದೆಯೇ ಎಂದು ಪರಿಶೀಲನೆ ನಡೆಸಿದ್ದರು.

ಅಂದು ಮಾತನಾಡಿದ ಐಜಿಪಿ‌ ಸುಬ್ರಹ್ಮಣ್ಯೇಶ್ವರ್ ರಾವ್, ಲೋಕಾಯುಕ್ತರ ನಿರ್ದೇಶನದನ್ವಯ ಲೋಕಾಯುಕ್ತ ಪೊಲೀಸ್ ಘಟಕದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆಯ ಭಾಗವಾಗಿ ಲೋಕಾಯುಕ್ತ ಎಂಜಿನಿಯರಿಂಗ್ ವಿಭಾಗ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಮೇಲ್ನೋಟಕ್ಕೆ ಇಲ್ಲಿರುವ ಒಳಚರಂಡಿ ವ್ಯವಸ್ಥೆಯಲ್ಲಿ ನೀರಿನ ಹರಿವು‌ ಅಧಿಕವಾದ ಕಾರಣದಿಂದ ಅವಘಡ ಸಂಭವಿಸಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಇಲ್ಲಿರುವ ಸಮಸ್ಯೆಗಳನ್ನ ಪತ್ತೆಹಚ್ಚಿ, ನಗರದಲ್ಲಿರುವ ಬೇರೆ ಅಂಡರ್ ಪಾಸ್​ನಲ್ಲಿರುವ ಸಮಸ್ಯೆಗಳಿಗೂ ಸಹ ಜಂಟಿಯಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಜೊತೆಗೆ ಅವಘಡಕ್ಕೆ ಯಾರದ್ದಾದರೂ ನಿರ್ಲಕ್ಷ್ಯ ಕಾರಣವಾಗಿದ್ದರೆ ಅವರ ವಿರುದ್ಧ ಲೋಕಾಯುಕ್ತರಿಗೆ ವರದಿ ಸಲ್ಲಿಸುತ್ತೇವೆ ಎಂದಿದ್ದರು.

ಮೇ 21ರಲ್ಲಿ‌ ನಗರದಲ್ಲಿ ಸುರಿದ ಭಾರಿ‌ ಮಳೆಗೆ ಕೆ.ಆರ್.ಸರ್ಕಲ್ ಅಂಡರ್ ಪಾಸ್​ನಲ್ಲಿ ಕಾರು ಮುಳುಗಿದ ಪರಿಣಾಮ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವನ್ನಪ್ಪಿದ್ದರು. ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ಪ್ರತಿಕ್ರಿಯೆ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೋಟಿಸ್ ಜಾರಿ ಮಾಡಿದ್ದರು.

Leave a Reply

Your email address will not be published. Required fields are marked *