ಲಕ್ನೋ: ದೇವಸ್ಥಾನದ ಕೊಠಡಿಯೊಂದರಲ್ಲಿ ಅರ್ಚಕ (Priest) ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಅಯೋಧ್ಯೆಯಲ್ಲಿ (Ayodhya) ಸೋಮವಾರ ನಡೆದಿದೆ.

28 ರಿಂದ 30 ವರ್ಷದ ಒಳಗಿನ ರಾಮ್‌ಶಂಕರ್ ದಾಸ್ ಆತ್ಮಹತ್ಯೆ ಮಾಡಿಕೊಂಡಿರುವ ಅರ್ಚಕ. ಇವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಫೇಸ್‌ಬುಕ್ ಲೈವ್ (Facebook Live) ಬಂದಿದ್ದು, ಇಬ್ಬರು ಪೊಲೀಸರು ತನಗೆ 2 ಲಕ್ಷ ರೂ. ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಲೈವ್ ಮಾಡಿದ್ದಾರೆ. ಅರ್ಚಕ ಮಾದಕವ್ಯಸನಿ ಆಗಿದ್ದು, ಆರೋಪಗಳು ಆಧಾರರಹಿತ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಿರುಕುಳದಿಂದ ಮನನೊಂದ ನರಸಿಂಗ್ ದೇವಸ್ಥಾನದ ಅರ್ಚಕ ತನ್ನ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನವರಿಯಲ್ಲಿ ಮುಖ್ಯ ಅರ್ಚಕ ರಾಮ್ ಸರಣ್ ದಾಸ್ ನಾಪತ್ತೆಯಾದ ಬಳಿಕ ಇವರೊಬ್ಬರೇ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು. ಎಷ್ಟು ಬಡಿದರೂ ಬಾಗಿಲು ತೆರೆಯುತ್ತಿಲ್ಲ ಎಂಬ ಮಾಹಿತಿ ತಿಳಿದ ಕೂಡಲೇ ಪೊಲೀಸರು ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ. ಈ ವೇಳೆ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಯೋಧ್ಯೆಯ ಎಸ್‌ಹೆಚ್‌ಒ (SHO) ಮನೋಜ್ ಕುಮಾರ್ ಶರ್ಮ ತಿಳಿಸಿದ್ದಾರೆ.

ರಾಮ್‌ಶಂಕರ್ ದೇವಸ್ಥಾನದ ಒಳಗೆ ವಾಸಿಸುತ್ತಿದ್ದು, ದೇವಸ್ಥಾನದ ಭದ್ರತೆಗಾಗಿ ಕೆಲವು ಪೊಲೀಸರನ್ನು ಸಹಾ ನಿಯೋಜಿಸಲಾಗಿತ್ತು. ಆದರೆ ಅರ್ಚಕರಿಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ಬೆಳ್ಳಿ ಹಾಗೂ ತಾಮ್ರದ ಸಾಮಾನುಗಳನ್ನು ಮಾರಾಟ ಮಾಡುವಲ್ಲಿ ಪೊಲೀಸರೊಂದಿಗೆ ಸಮಸ್ಯೆಗಳನ್ನು ಹೊಂದಿದ್ದರು. ಪೊಲೀಸರನ್ನು ದೇವಸ್ಥಾನದ ಒಳಗೆ ನಿಯೋಜಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದರಿಂದ ಅವರನ್ನು ದೇವಸ್ಥಾನದ ಹೊರಗೆ ನಿಯೋಜಿಸಲಾಗಿತ್ತು.

ತೀವ್ರ ಮಾದಕವ್ಯಸನಿಯಾಗಿದ್ದ ಅರ್ಚಕರು ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ ಬಳಿಕ ಮಾದಕವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಕೆಲವು ಗಂಟೆಗಳ ಬಳಿಕ ಇವರ ಫೇಸ್‌ಬುಕ್ ಲೈವ್ ಬಗ್ಗೆ ಮಾಹಿತಿ ಬಂದಿದೆ. ಇದನ್ನು ಅವರು ಆತ್ಮಹತ್ಯೆ ಮಾಡಿಕೊಳ್ಳುವ 10 ಗಂಟೆಗಳ ಮೊದಲು ಚಿತ್ರೀಕರಿಸಿದ್ದಾರೆ. ರಾಯ್‌ಗಂಜ್ ಪೊಲೀಸ್ ಹೊರಠಾಣೆ ಪ್ರಭಾರ ಉಪನೀರಿಕ್ಷಕರಾಗಿದ್ದ ಸ್ವತಂತ್ರ ಕುಮಾರ್ ಮೌರ್ಯ ಹಾಗೂ ಕಾನ್ಸ್ಟೇಬಲ್‌ ಸುಭಾಷ್ ಸಿಂಗ್ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಅರ್ಚಕ ವಿಡಿಯೋದಲ್ಲಿ ಆರೋಪಿಸಿದ್ದಾರೆ ಎಂದು ಶರ್ಮ ತಿಳಿಸಿದ್ದಾರೆ.

ಅರ್ಚಕರ ಶವಸಂಶ್ಕಾರ ಮಂಗಳವಾರ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲಿಸರು ತನಿಖೆ ಕೈಗೊಂಡಿದ್ದಾರೆ.

By admin

Leave a Reply

Your email address will not be published. Required fields are marked *