ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು FCI ತಿರಸ್ಕರಿಸಿದೆ ಎನ್ನುವ ಮಾಜಿ ಮುಖ್ಯಮಂತ್ರಿ ಬಸವರಾಜ ಆರೋಪಕ್ಕೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಅಲ್ಲದೇ ಈ ಬಗ್ಗೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ನೀಡುತ್ತಿಲ್ಲ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಬೊಮ್ಮಾಯಿ ತಿರುಗೇಟು: ಪ್ರತಿಭಟನೆ ಎಚ್ಚರಿಕೆ

ಮಾಜಿ ಸಿಎಂ ಬೊಮ್ಮಾಯಿ​​

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ(Anna Bhagya scheme) ಹೆಚ್ಚುವರಿ ಅಕ್ಕಿ ನೀಡಲು FCI ತಿರಸ್ಕರಿಸಿದೆ ಎನ್ನುವ ಮಾಜಿ ಮುಖ್ಯಮಂತ್ರಿ ಬಸವರಾಜ ಆರೋಪಕ್ಕೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲವೆಂದು ಎಂದು ಸಿಎಂ ಆರೋಪಿಸಿದ್ದಾರೆ. ಅಕ್ಕಿ ಕೊಡುತ್ತೇವೆಂದು ಹೇಳಿದ್ದ ಕಾಂಗ್ರೆಸ್​ ಈಗ ಜನರಿಗೆ ಮೋಸ ಮಾಡುತ್ತಿದೆ. ರೈತರಿಗೆ, ಜನರಿಗೆ ಕೊಟ್ಟ‌ ಮಾತಿಂದ ತಪ್ಪಿಸಿಕೊಳ್ಳಲು ರಾಜಕಾರಣ ಮಾಡುತ್ತಿದೆ. ಕೇಂದ್ರದ ಆಹಾರ ಸಚಿವರಿಗೆ ಪತ್ರ ಬರೆದು ಎರಡು ಮೂರು ತಿಂಗಳಾದರೂ ನೀಡಿ ಎಂದು ಹೇಳಬೇಕಿತ್ತು. ಅದನ್ನು ಮಾಡಿಲ್ಲ, ಎಫ್​ಸಿಐಗೆ ಏನೂ ಅಥಾರಿಟಿ ಇಲ್ಲ. ಎಫ್ ಸಿಐ ಕೇವಲ ಸ್ಟಾಕ್ ಮಾಡುತ್ತದೆ. ಕೇಂದ್ರಕ್ಕೆ ಆಹಾರ ಇಲಾಖೆ ಸಚಿವರನ್ನು ಕಳಿಸಬೇಕಿತ್ತು. ಈಗ ಎಫ್​ಸಿಐ ಗೆ ಪತ್ರ ಬರೆದು ಅವರು ನೀಡಿದ ಉತ್ತರದ ಮೇಲೆ ರಾಜಕೀಯ ಮಾಡುತ್ತಿದ್ದೀರಿ. ಇದು ನಿಮಗೆ ಶೋಭೆ ತರಲ್ಲ. ಅಕ್ಕಿ ನೀಡಲು ಆಗದೇ ಇದ್ರೆ ಜನರಿಗೆ ಹಣ ನೀಡಿ. ಜುಲೈನಿಂದ ರೇಷನ್ ನೀಡಿಲ್ಲ ಅಂದ್ರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆಹಾರ ಭದ್ರತಾ ಕಾಯ್ದೆಯಡಿ ಎಲ್ಲರಿಗೂ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದೆ. ಯಾವುದೇ ಖರ್ಚು ಇಲ್ಲದೇ ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಅಕ್ಕಿ ನೀಡುತ್ತಿದೆ. ಸಾಗಣೆ ವೆಚ್ಚ, ನಿರ್ವಹಣಾ ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಸತ್ಯ ಹೇಳಬೇಕೆಂದರೆ ರಾಜ್ಯ ಸರ್ಕಾರ 10 ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು. ಕೇಂದ್ರ ನೀಡುವ ಅಕ್ಕಿ ಸೇರಿ ರಾಜ್ಯ ಸರ್ಕಾರ ಒಟ್ಟು 15 ಕೆಜಿ ಅಕ್ಕಿ ನೀಡಬೇಕು. ಆದ್ರೆ ಕೇಂದ್ರದ 5 ಕೆಜಿ, ರಾಜ್ಯದ 5 ಕೆಜಿ ಸೇರಿಸಿ 10 ಕೆಜಿ ನೀಡುತ್ತೇವೆ ಎನ್ನುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಎಫ್ ಸಿಐ ಅಥವಾ ಟೆಂಡರ್ ಮುಖಾಂತರ ಅಕ್ಕಿ ಖರೀದಿ ಮಾಡಬೇಕಾಗುತ್ತದೆ ಎಂದು ನಾನೇ ಫೈಲ್ ನಲ್ಲಿ ಕ್ಲಿಯರ್ ಬರೆದಿದ್ದೆ. ನಮ್ಮ ಸರ್ಕಾರ ಇದ್ದಾಗಲೂ ಎಫ್ ಸಿಐ ಅಕ್ಕಿ ನೀಡಲ್ಲ ಎಂದಿತ್ತು. ಹೀಗಾಗಿ ನಾನು ಅಂದೇ ಫೈಲ್ ನಲ್ಲಿ ಬರೆದಿದ್ದೆ. ಎಫ್ ಸಿಐ ಮೇಲೆ ಅವಲಂಬನೆ ಆಗಬೇಡಿ ಎಂದು ಹೇಳಿದ್ದೆ. ಅಲ್ಪಾವಧಿ ಟೆಂಡರ್ ಆದರೂ ಕರೆಯಬೇಕಾಗಿತ್ತು. ಅಂದೇ ಟೆಂಡರ್ ಕರೆದಿದ್ರೆ ಸಮಸ್ಯೆ ಆಗುತ್ತಿರಲಿಲ್ಲ. ಈಗ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಇನ್ನು ಇದೇ ವೇಳೆ ವಿದ್ಯುತ್ ಬಿಲ್‌ ಏರಿಕೆ ವಿಚಾರದ ಮಾತನಾಡಿ, ಮೇ 12ಕ್ಕೆ ನಮ್ಮ ಸರ್ಕಾರ ಇತ್ತಾ? ಆಗ ವಿದ್ಯುತ್ ಬಿಲ್ ಹೆಚ್ಚಳ ಬಗ್ಗೆ ನೋಟಿಫಿಕೇಶನ್ ಆಗಿತ್ತು. ಆದರೆ ಜೂನ್ 2ಕ್ಕೆ ಆದೇಶ ಆಗಿದೆ. ಆಗ ಯಾರ ಸರ್ಕಾರ ಇತ್ತು? ಈ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಮಾತೆತ್ತಿದ್ರೆ ಹಿಂದಿನ ಸರ್ಕಾರ ಮಾಡಿದ್ದು ಅಂತಾರೆ. ನಮ್ಮ ಸರ್ಕಾರದ ಹಲವು ಕಾಮಗಾರಿ, ಟೆಂಡರ್‌ಗಳನ್ನು ನಿಲ್ಲಿಸಿದೆ. ಈಗ ವಿದ್ಯುತ್ ದರವನ್ನೂ ಇವರ ಸರ್ಕಾರ ನಿಲ್ಲಿಸಲಿ. ಎರಡೂ ಪಕ್ಷಗಳ ಸರ್ಕಾರ ಇಲ್ಲದಿದ್ದಾಗ ವಿದ್ಯುತ್ ದರ ಹೆಚ್ಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *