Murder in Bengaluru: ಡಬಲ್​ ಬಾಡಿಗೆ ಕೇಳಿದ ಆಟೋ ಚಾಲಕ.. ಪ್ರಶ್ನಿಸಿದ ಪ್ರಯಾಣಿಕನ ಕೊಲೆ

Murder in Bengaluru: ಡಬಲ್​ ಬಾಡಿಗೆ ಕೇಳಿದ ಆಟೋ ಚಾಲಕ.. ಪ್ರಶ್ನಿಸಿದ ಪ್ರಯಾಣಿಕನ ಕೊಲೆ

ಡಬಲ್​ ಬಾಡಿಗೆ ಕೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಅಸ್ಸೋಂ ಮೂಲದ ವ್ಯಕ್ತಿಯೋಬ್ಬನನ್ನು ಆಟೋಚಾಲಕ ಹತ್ಯೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದೆ.

ಬೆಂಗಳೂರು: ಆಟೋ ಚಾಲಕನ ಹಗಲು ರೌಡಿಸಂಗೆ ಅಮಾಯಕ ಸಹೋದರರ ಪೈಕಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಯಶವಂತಪುರದ ಸೋಫ್ ಫ್ಯಾಕ್ಟರಿ ಬಳಿ ನಡೆದಿದೆ.

ಆಟೋ ಚಾಲಕ ಅಶ್ವಥ್ ಎಂಬಾತನಿಂದ ಹಲ್ಲೆಗೊಳಗಾದ ಅಸ್ಸೋಂ ಮೂಲದ ಅಹ್ಮದ್ (28) ಸಾವನ್ನಪ್ಪಿದರೆ, ಆತನ ಸಹೋದರ ಆಯೂಬ್ ಗಾಯಗೊಂಡಿದ್ದಾರೆ.

ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಅಹ್ಮದ್ ಹಾಗೂ ಆಯೂಬ್ ಸಹೋದರರು ಯಶವಂತಪುರದಲ್ಲಿ ವಾಸವಿದ್ದರು. ತಡರಾತ್ರಿ ಕೆಲಸ ಮುಗಿಸಿ ಆಟೋ ಪಡೆದು ಮನೆಗೆ ಹೊರಟಿದ್ದಾಗ ಚಾಲಕ ಅಶ್ವಥ್, ಡಬಲ್ ಬಾಡಿಗೆ ಕೇಳಿದ್ದಾರೆ. ಡಬಲ್ ಮೀಟರ್ ಯಾಕೆ.?’ ಎಂದು ಪ್ರಶ್ನಿಸಿದ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಅಹ್ಮದ್ ಸಾವನ್ನಪ್ಪಿದ್ದು, ಆಯೂಬ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಕುರಿತು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಟೋ ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಗೂಂಡಾಗಿರಿ ಇದೇ ಮೊದಲಲ್ಲ: ರ‍್ಯಾಪಿಡೋ ದ್ವಿಚಕ್ರ ವಾಹನ ಬುಕ್ ಮಾಡಿ ಕಾಯುತ್ತಿದ್ದ ಟೆಕ್ಕಿಯ ಮೇಲೆ ಆಟೋ ಚಾಲಕನೊಬ್ಬ ಆಟೋ ಹರಿಸಲು ಯತ್ನಿಸಿರುವ ಘಟನೆ ಮೇ 25ರಂದು ಬೆಳಗ್ಗಿನ ಜಾವ ಹೆಚ್‌ಎಸ್‌ಆರ್ ಲೇಔಟ್ ಸೆಕ್ಟರ್ 1ರಲ್ಲಿ ನಡೆದಿತ್ತು. ರ‍್ಯಾಪಿಡೋ ಕ್ಯಾಪ್ಟನ್ ನನ್ನು ತಡೆದ ಆಟೋ ಚಾಲಕನೊಬ್ಬ, ಆತನ ಕೈಯಲ್ಲಿದ್ದ ಹೆಲ್ಮೆಟ್ ಒಡೆದು, ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದಬ್ಬಾಳಿಕೆ ಮೆರೆದಿದ್ದ ಘಟನೆ ಮಾರ್ಚ್ 7ರಂದು ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿತ್ತು.

ಆಸ್ತಿಗಾಗಿ ಅಕ್ಕನ ಕೊಲೆ ಮಾಡಿದ ತಮ್ಮ.. ಇತ್ತೀಚೆಗೆ ದಾವಣಗೆರಯಲ್ಲಿನ ಪ್ರಕರಣವೊಂದರಲ್ಲಿ ಆಸ್ತಿ ವಿಚಾರವಾಗಿ ಅಕ್ಕನನ್ನೇ ತಮ್ಮ ಕೊಲೆ ಮಾಡಿದ್ದ. ಜಿಲ್ಲೆಯ ‌ಚನ್ನಗಿರಿ ತಾಲೂಕಿನ ಗುಳ್ಳೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಆಸ್ತಿ ವಿಚಾರಕ್ಕೆ ಅಕ್ಕ ಮತ್ತು ತಮ್ಮನ ನಡುವೆ ಜಗಳ ನಡೆದಿತ್ತು. ಈ ವೇಳೆ ಪ್ರಭಾಕರ ಎಂಬ ಆರೋಪಿ ಮಕ್ಕಳ ಜೊತೆ ಸೇರಿ ತನ್ನ ಅಕ್ಕನನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಪ್ರಭಾಕರ, ಆತನ ಪುತ್ರ ದಿಲೀಪ್​​ ಮತ್ತು ಪುತ್ರಿ ತ್ರಿವೇಣಿ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.

ಹಳೇಯ ದ್ವೇಷ : ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ.. ಕಲಬುರಗಿಯಲ್ಲಿ ನಡೆದ ಘಟನೆಯೊಂದರಲ್ಲಿ ಹಳೇಯ ದ್ವೇಷದ ಹಿನ್ನೆಲೆ 6 ಜನರ ಗುಂಪೊಂದು ಯುವಕನೊರ್ವನನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಲಾಗಿತ್ತು. ನಗರದ ಅಜಾದಪೂರ ಮಾರ್ಗದ ಹುಂಡೇಕಾರ ಕಾಲೋನಿಯಲ್ಲಿ ಕೊಲೆ ನಡೆದಿತ್ತು. ಸಿರಾಜ ಎಂಬ ಯುವಕನ ಹತ್ಯೆಯಾಗಿತ್ತು. ಹುಂಡೇಕಾರ ಕಾಲೋನಿಯ ನಿವಾಸಿ ಸೈಫನ್ ಅಲಿಖಾನ್​, ಈತನ ತಂದೆ ಶೌಕತ್ ಹಾಗೂ ಮೂವರು ಸಹೋದರರು ಹಲ್ಲೆ ಮಾಡಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಇಲ್ಲಿಯ ವಿಶ್ವವಿದ್ಯಾಲಯ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *