Lokayukta traps: ಲಂಚ ಪಡೆಯುತ್ತಿದ್ದ ಹರಿಹರ ನಗರಸಭೆ ಸದಸ್ಯೆ ಲೋಕಾಯುಕ್ತ ಬಲೆಗೆ

Lokayukta traps: ಲಂಚ ಪಡೆಯುತ್ತಿದ್ದ ಹರಿಹರ ನಗರಸಭೆ ಸದಸ್ಯೆ ಲೋಕಾಯುಕ್ತ ಬಲೆಗೆ

ಲಂಚ ಪಡೆಯುತ್ತಿದ್ದ ವೇಳೆ ಹರಿಹರ ನಗರಸಭೆ ಸದಸ್ಯೆಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ದಾವಣಗೆರೆ: ಲಂಚ ಸ್ವೀಕರಿಸುವ ವೇಳೆ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯೆ ಹಾಗೂ ನಗರಸಭೆ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.‌ ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆ 5ನೇ ವಾರ್ಡ್ ಸದಸ್ಯೆ ನಾಗರತ್ನಾ ಎನ್.ಕೆ ಹಾಗೂ ಇಂಜಿನಿಯರ್ ಎಂ ಅಬ್ದುಲ್ ಹಮೀದ್ ಅವರು ಲೋಕಾ ಬಲೆಗೆ ಬಿದ್ದವರು.

ಹರಿಹರ ನಗರಸಭಾ ವ್ಯಾಪ್ತಿಯಲ್ಲಿ ಮಾಡಿದ ಗುತ್ತಿಗೆ ಕೆಲಸಗಳಿಗೆ ಬಿಲ್ ಮಾಡಲು ಹಾಗೂ ನಗರಸಭಾ ಸದಸ್ಯರು ತಮ್ಮ ವಾರ್ಡನಲ್ಲಿ ಮಾಡಿದ ಕೆಲಸಗಳಿಗೆ ಶೇ.10ರಷ್ಟು ಕಮಿಷನ್ ನೀಡುವಂತೆ ಒತ್ತಾಯ ಮಾಡುತ್ತಿದ್ದರು. ಇನ್ನು ಲಂಚಕ್ಕೆ ನಾಗರತ್ನರವರ ಪತಿ ಮಂಜುನಾಥ್ ಹಾಗೂ ಪುತ್ರ ರೇವಂತ ಇಬ್ಬರು ಸಹಕರಿಸಿದ್ದಾರೆ. ಇವರು ಕ್ಲಾಸ್ 1 ಗುತ್ತಿಗೆದಾರರಾದ ಮಹಮದ್ ಮಜರ್ ಬಳಿ ಶೇ.10ರಷ್ಟು ಕಮಿಷನ್ ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ. ಇನ್ನು ಹರಿಹರ ನಗರಸಭಾ ಸಹಾಯಕ ಇಂಜಿನಿಯರ್ ಎಂ.ಅಬ್ದುಲ್‌ ಹಮೀದ್ ಸಹ ಶೇ.5 ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಲೋಕಾಯುಕ್ತಕ್ಕೆ ದೂರು ನೀಡಿದ ಗುತ್ತಿಗೆದಾರ: ಲಂಚಕ್ಕೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಗುತ್ತಿಗೆದಾರ ಮಹಮದ್‌ ಮಜರ್ ದಾವಣಗೆರೆ ಲೋಕಾಯುಕ್ತ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು, ಇದೀಗ ರೆಡ್​ ಹ್ಯಾಂಡ್​ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ಪ್ರಕಟಣೆ

ಇನ್ನು ಗುತ್ತಿಗೆದಾರ ಮಹಮದ್ ಮಜರ್ ಅವರು ನಗರಸಭಾ ಸಹಾಯಕ ಇಂಜಿನಿಯರ್ ಎಂ.ಅಬ್ದುಲ್ ಹಮೀದ್ ಅವರಿಗೆ ಮುಂಗಡವಾಗಿ 30,000 ಲಂಚ ನೀಡಿದ್ದರು. ಇದೀಗ 20,000 ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ. ಅದೇ ರೀತಿ ನಗರಸಭಾ ಸದಸ್ಯೆ ನಾಗರತ್ನ ಅವರು ಸಹ ಈಗಾಗಲೇ 40,000 ಲಂಚ ಪಡೆದಿದ್ದು, ಈಗ ತಮ್ಮ ನಿವಾಸದಲ್ಲಿ 20,000 ಲಂಚ ಪಡೆಯುವಾಗ ರೆಡ್ ಹ್ಯಾಂಡ ಆಗಿ ಲೋಕಾಯುಕ್ತ ಬಲೆ ಬಿದ್ದಿದ್ದಾರೆ.

ನಾಲ್ವರ ವಶಕ್ಕೆ ಪಡೆದ ಲೋಕಾಯುಕ್ತ: ದಾವಣಗೆರೆ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಲೋಕಾ ಅಧಿಕಾರಿಗಳು ಕಾರ್ಯಾಚರಣೆ ಮಾಡಿ, ಲಂಚದ ಹಣ ಹಾಗೂ ನಾಲ್ವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ನಗರಸಭಾ ಸದಸ್ಯೆ ನಾಗರತ್ನ, ಪತಿ ಮಂಜುನಾಥ್, ಪುತ್ರ ರೇವಂತ ಕಾಂಡಿಕೆ, ಇಂಜಿನಿಯರ್ ಎಂ.ಅಬ್ದುಲ್ ಹಮೀದ್ ಅವರನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆಸಲಾಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ.

ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪಿಎಸ್‍ಐ, ಕಾನ್ಸ್‌ಟೇಬಲ್: ಇತ್ತೀಚೆಗೆ ಲಂಚ ಸ್ವೀಕರಿಸುತ್ತಿದ್ದ ಬಸವಕಲ್ಯಾಣ ತಾಲೂಕಿನ ಮಂಠಾಳದ ಪಿಎಸ್‍ಐ ಹಾಗೂ ಕಾನ್ಸ್‌ಟೇಬಲ್‌ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್​​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದರು. ಪಿಎಸ್‍ಐ ಶೀಲಾ ನ್ಯಾಮನ್ ಮತ್ತು ಕಾನ್ಸ್‌ಟೇಬಲ್‌ ಪರಶುರಾಮ ರೆಡ್ಡಿ ಬಂಧಿತರು. ಇವರು ಮರಳು ಸಾಗಾಣಿಕೆ ಮಾಡಲು ಪ್ರತಿ ತಿಂಗಳು ಒಂದು ಲಾರಿಗೆ 7 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಒಟ್ಟು ಮೂರು ಲಾರಿಗಳಿಗೆ 21 ಸಾವಿರ ರೂ. ಬೇಡಿಕೆ ಇಟ್ಟಿದ್ದು , ಕಲಬುರಗಿ ನಗರದ ಇರ್ಷಾದ್ ಪಟೇಲ್ ಎನ್ನುವವರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಲೋಕಾಯುಕ್ತ ಎಸ್​ಪಿ ಎ.ಆರ್.ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಎನ್.ಎಂ ಓಲೇಕಾರ್, ತನಿಖಾಧಿಕಾರಿಗಳಾದ ಬಾಬಾ ಸಾಹೇಬ್ ಪಾಟೀಲ್, ಪ್ರದೀಪ ಕೊಳ್ಳಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.

Leave a Reply

Your email address will not be published. Required fields are marked *