ಮುಂದಿನ 4 ದಿನಗಳ ಕಾಲ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ : ಯೆಲ್ಲೋ ಅಲರ್ಟ್

ಮುಂದಿನ 4 ದಿನಗಳ ಕಾಲ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ : ಯೆಲ್ಲೋ ಅಲರ್ಟ್

ಮುಂದಿನ ನಾಲ್ಕು ದಿನಗಳಲ್ಲಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಎ ಪ್ರಸಾದ್ , ಹವಾಮಾನ ತಜ್ಞ

ಬೆಂಗಳೂರು : ರಾಜ್ಯಕ್ಕೆ ನೈಋತ್ಯ ಮುಂಗಾರು ನಿಗದಿತ ಅವಧಿಗಿಂತ ವಿಳಂಬವಾಗಿ ಪ್ರವೇಶಿಸಿದೆ.

ಮುಂದಿನ 4 ದಿನಗಳ ಕಾಲ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 13ರಂದು ದಕ್ಷಿಣ ಒಳನಾಡು, ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದೆ.

ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಕೂಡ ತುಂತುರು ಮಳೆಯ ನಿರೀಕ್ಷೆ ಇದೆ ಎಂದಿದೆ.

ಕರಾವಳಿಯಲ್ಲಿ ಇಂದೂ ಭಾರಿ ಮಳೆ: ಸೋಮವಾರ ಕೆಲವೆಡೆ ಮಾತ್ರ ಮುಂಗಾರು ಮಳೆ ಸುರಿದಿದೆ. ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಭಾರಿ ಮಳೆಯಾಗಿದೆ. ರಾಜ್ಯದ ಹಲವೆಡೆ ತುಂತುರು ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.

ದಿನದಲ್ಲಿ ಬಿಸಿಲಿನ ವಾತಾವರಣ : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಬಳಿಕ ನಗರದ ಹಲವೆಡೆ ತುಂತುರು ಮಳೆಯಾಗಿದೆ. ಮತ್ತೆ ಕೆಲವೆಡೆ ಮೋಡ ಕವಿದ ವಾತಾವರಣ ಅಷ್ಟೇ ಕಂಡು ಬಂದಿದೆ.

ತಡ ರಾತ್ರಿಯವರೆಗೆ ಮಳೆ: ಬೆಂಗಳೂರು ನಗರದಲ್ಲಿ ಎಂದಿನಂತೆ ಸೋಮವಾರ ರಾತ್ರಿ ಮತ್ತೆ ಮಳೆ ಆರಂಭವಾಗಿದೆ. ಎಲ್ಲೆಲ್ಲೂ ಮೋಡ ಕವಿದ ವಾತಾವರಣವೇ ಕಂಡು ಬಂದಿದೆ. ಇಂದು ತಡರಾತ್ರಿವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿಯುವ ಲಕ್ಷಣಗಳು ಇವೆ.

ಬಸವನಪುರ, ಗಂಗಾನಗರ, ಲಗ್ಗೆರೆ ರಾಜರಾಜೇಶ್ವರಿ ನಗರ, ದೇವರ ಜೀವನಹಳ್ಳಿ, ಬಸವನಗುಡಿ, ಪುಲಕೇಶಿ ನಗರ, ಶಂಕರಮಠ, ಮಲ್ಲೇಶ್ವರಂ, ವಿಜಯನಗರ, ನಾಯಂಡಹಳ್ಳಿ, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳು, ಯಲಹಂಕ, ಹೆಬ್ಬಾಳ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ತುಂತುರು ಮತ್ತು ಕೆಲವೊಮ್ಮೆ ಹಗುರ ಮಳೆ ಸಹ ಬಿದ್ದಿದೆ.

ಮಂಡ್ಯದಲ್ಲಿ ವರುಣಾರ್ಭಟ : ವಾಡಿಕೆಯಂತೆ ಜೂನ್​ ತಿಂಗಳ ಮೊದಲ ವಾರದಲ್ಲೇ ಬರಬೇಕಿದ್ದ ಮುಂಗಾರು ಮಳೆ 10 ದಿನ ತಡವಾಗಿ ರಾಜ್ಯಕ್ಕೆ ಆಗಮಿಸಿದೆ. ಅಲ್ಲದೆ ಜೂನ್​​ 9ರಂದು ಮಂಡ್ಯದ ಕೆಲವು ತಾಲೂಕುಗಳಲ್ಲಿ ಅಪಾರ ಪ್ರಮಾಣದ ಮಳೆಯಾಗಿತ್ತು. ಧಾರಾಕಾರವಾಗಿ ಸುರಿದ ಮಳೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿತ್ತು.

ಮನೆಗಳಿಗೆ ಹಾನಿ : ಭಾರಿ ಮಳೆಯಿಂದಾಗಿ ಇಲ್ಲಿನ ಕೆಲವು ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಮನೆಗಳ ಹಾನಿಗೊಳಗಾಗಿದ್ದವು. ಬೆಸಗರಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ 15ಕ್ಕೂ ಹೆಚ್ಚು ತೆಂಗಿನ ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದವು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸಿಬ್ಬಂದಿಗಳು ವಿದ್ಯುತ್​ ಕಂಬಗಳ ತೆರವು ಕಾರ್ಯ ಮಾಡಿದವು.

Leave a Reply

Your email address will not be published. Required fields are marked *