ಪ್ಲಾಸ್ಟಿಕ್ ಡಬ್ಬ ನುಂಗಿ ಪರದಾಡಿದ ನಾಗರಹಾವು : ಶಸ್ತ್ರಚಿಕಿತ್ಸೆ ಮೂಲಕ ಡಬ್ಬ ಹೊರತೆಗೆದ ವೈದ್ಯರು

ಪ್ಲಾಸ್ಟಿಕ್ ಡಬ್ಬ ನುಂಗಿ ಪರದಾಡಿದ ನಾಗರಹಾವು : ಶಸ್ತ್ರಚಿಕಿತ್ಸೆ ಮೂಲಕ ಡಬ್ಬ ಹೊರತೆಗೆದ ವೈದ್ಯರು

ಪ್ಲಾಸ್ಟಿಕ್​ ಡಬ್ಬ ನುಂಗಿ ಗಾಯಗೊಂಡಿದ್ದ ನಾಗರ ಹಾವಿನ ರಕ್ಷಣೆ ಮಾಡಿದ ಉರಗ ತಜ್ಞ ಅದಕ್ಕೆ ಶಸ್ತ್ರ ಚಿಕಿತ್ಸೆ ಕೊಡಿಸಿ ಮರಳಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಗಾಯಗೊಂಡ ನಾಗರಹಾವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಮಂಗಳೂರು: ನಾಗರಹಾವಿನ ಉದರ ಸೇರಿದ್ದ ಸುಣ್ಣದ ಪ್ಲಾಸ್ಟಿಕ್​ ಡಬ್ಬವೊಂದನ್ನು ಯುವ ವೈದ್ಯರೊಬ್ಬರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

ಬಂಟ್ವಾಳದ ವಗ್ಗದಲ್ಲಿರುವ ಸಾಲುಮರ ತಿಮ್ಮಕ್ಕ ಉದ್ಯಾನವನದ ಸಮೀಪದ ಕಾವಳಪಡೂರು ಗ್ರಾಪಂ ಉಪಾಧ್ಯಕ್ಷೆ ವಸಂತಿಯವರ ಮನೆ ಬಳಿಯಿದ್ದ ಬಿಲವೊಂದರಲ್ಲಿ ಸಿಲುಕಿ‌ ಈ ನಾಗರಹಾವು ಹೊರಬರಲಾಗದೇ ಒದ್ದಾಡುತಿತ್ತು. ಮೂರು ದಿನಗಳಿಂದ ಅದನ್ನು ಗಮನಿಸುತ್ತಿದ್ದ ಮನೆಯವರು ಜೂನ್ 6ರಂದು ಸ್ನೇಕ್ ಕಿರಣ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಕಿರಣ್​ ಅವರು ಹಾವನ್ನು ಬಿಲದಿಂದ ಹೊರ ತೆಗೆದು ರಕ್ಷಿಸಿದ್ದಾರೆ. ಈ ವೇಳೆ ಅದರ ತಲೆಯ ಕೆಳಭಾಗದಲ್ಲಿ ಗಾಯಗಳಾಗಿರುವುದು ಕಂಡು ಬಂದಿದೆ. ಗಮನಿಸಿದ ಕಿರಣ್ ಗಾಯಗೊಂಡ ಹಾವನ್ನು​ ಚಿಕಿತ್ಸೆಗಾಗಿ ಮಂಗಳೂರಿನ ಪಶುವೈದ್ಯ ಡಾ. ಯಶಸ್ವಿ ನಾರಾವಿ ಅವರ ಬಳಿ ತಂದಿದ್ದರು.

ಗಾಯಕ್ಕೆ ಚಿಕಿತ್ಸೆ ಒದಗಿಸಿದ ವೈದ್ಯರು ಹಾವಿನ ಹೊಟ್ಟೆ ಉಬ್ಬೇರಿದ್ದನ್ನು ಗಮನಿಸಿ ಎಕ್ಸ್ ರೇ ಮಾಡಿದ್ದಾರೆ. ಆಗ ಅದರ ಉದರದೊಳಗೆ ಪ್ಲಾಸ್ಟಿಕ್ ವಸ್ತುವಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿ ಅದರ ಉದರದೊಳಗಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಡಾ. ಯಶಸ್ವಿ ಅವರ ಪ್ರಕಾರ ‘ಸುಮಾರು ಐದು ಅಡಿ ಉದ್ದದ ನಾಗರಹಾವು ಇದಾಗಿತ್ತು. 10ವರ್ಷ ಪ್ರಾಯವಾಗಿರಬಹುದು. ಹಾವು ಮೊಟ್ಟೆ ನುಂಗುವ ವೇಳೆ ಸುಣ್ಣದ ಡಬ್ಬವನ್ನು ಒಟ್ಟಿಗೆ ನುಂಗಿದ್ದಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಶಸ್ತ್ರ ಚಿಕಿತ್ಸೆಯ ಬಳಿಕ 15 ದಿನಗಳ ಕಾಲ ಶುಶ್ರೂಷೆ ಒದಗಿಸಿ ಯಾವುದೇ ತೊಂದರೆ ಇಲ್ಲವೆಂದು ಕಂಡ ಬಳಿಕ ಸ್ನೇಕ್ ಕಿರಣ್ ಅವರು ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಮತ್ತೆ ಹಾವನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಸೂಕ್ತ ಸಮಯದಲ್ಲಿ ಹಾವನ್ನು ರಕ್ಷಿಸಿ ಅದಕ್ಕೆ ಶಸ್ತ್ರಚಿಕಿತ್ಸೆ ನೀಡಿರುವುದರಿಂದ ಅದು ಬದುಕುಳಿದಿದೆ.

ಈ ಬಗ್ಗೆ ಮಾತನಾಡಿದ ಡಾ. ಯಶಸ್ವಿ ನಾರಾವಿ, 15 ದಿನಗಳ ಹಿಂದೆ ಸ್ನೇಕ್ ಕಿರಣ್ ಅವರು ಗಾಯಗೊಂಡ ನಾಗರ ಹಾವನ್ನು ತಂದು ಚಿಕಿತ್ಸೆಗೆ ನೀಡಿದ್ದರು. ಅದರ ಗಾಯಕ್ಕೆ ಚಿಕಿತ್ಸೆ ನೀಡುವ ವೇಳೆ ಅದರ ಉದರ ಉಬ್ಬಿರುವುದು ಕಂಡುಬಂದಿದೆ. ಅದನ್ನು ಎಕ್ಸ್ ರೇ ಮಾಡಿ ನೋಡಿದಾಗ ಪ್ಲಾಸ್ಟಿಕ್​​ ನುಂಗಿರುವುದು ತಿಳಿದುಬಂದಿದೆ. ಗಾಯಕ್ಕೆ ಸರ್ಜರಿ ಮಾಡುವಾಗ ಅದು ನುಂಗಿದ ಸುಣ್ಣದ ಪ್ಲಾಸ್ಟಿಕ್ ಡಬ್ಬಿಯನ್ನು ಸರ್ಜರಿ ಮಾಡಿ ತೆಗೆಯಲಾಗಿದೆ. ಅದು ಮೊಟ್ಟೆ ನುಂಗುವ ವೇಳೆ ಈ ಪ್ಲಾಸ್ಟಿಕ್ ಡಬ್ಬವನ್ನು ನುಂಗಿರುವ ಸಾಧ್ಯತೆ ಇದೆ. ಅದರ ಶಸ್ತ್ರ ಚಿಕಿತ್ಸೆ ಬಳಿಕ ಅದಕ್ಕೆ ಆಯಂಟಿ ಬಯೋಟಿಕ್ ನೀಡಿ, ಆಯಂಟಿ ಸೆಪ್ಟಿಕ್ ಹಾಕಿ ಚಿಕಿತ್ಸೆ ನೀಡಲಾಗಿದೆ.

ಗುಣಮುಖವಾದ ನಾಗರ ಹಾವನ್ನು ಸ್ನೇಕ್ ಕಿರಣ್ ಅವರು ಹಾವು ಸಿಕ್ಕಿದ ಜಾಗದಲ್ಲಿ ಬಿಟ್ಟಿದ್ದಾರೆ. ಹಾವು ಸಂಪೂರ್ಣ ಗುಣ‌ಮುಖ ಆಗಿದೆ ಎಂಬುದನ್ನು ಪರಿಶೀಲನೆ ಮಾಡಿದ ಬಳಿಕ ಈ ಪ್ರಕ್ರಿಯೆ ಮಾಡಲಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *