ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ ಸ್ಥಳದಲ್ಲೇ ತಾಯಿ ಮಗ ಸಾವು

ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ ಸ್ಥಳದಲ್ಲೇ ತಾಯಿ ಮಗ ಸಾವು

ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ: ಕೊಪ್ಪಳ ತಾಲೂಕಿನ ಮಂಗಳಪುರ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತಾಯಿ ಹಾಗೂ ಮಗ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮೃತರನ್ನು ಗದಗ್ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಪುಟ್ಟರಾಜು ವಸ್ತ್ರದ(46) ಹಾಗೂ ಗಂಗಮ್ಮ ವಸ್ತ್ರದ(70) ಎಂದು ಗುರುತಿಸಲಾಗಿದೆ. ಮೃತರು ಗಜೇಂದ್ರಗಡದಿಂದ ಕೊಪ್ಪಳ ಮಾರ್ಗವಾಗಿ ಹೊಸಪೇಟೆಗೆ ಬೈಕ್ ನಲ್ಲಿ ತೆರಳುತ್ತಿದ್ದರು.

ತಾಲೂಕಿನ ಮಂಗಳಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಪಕ್ಕದಲ್ಲಿ ನಿಂತಿರುವ ಲಾರಿಗೆ ದ್ವಿಚಕ್ರ ವಾಹನವು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರ ತಲೆಗೂ ಗಂಭೀರ ಪೆಟ್ಟಾಗಿ ರಕ್ತಸ್ರಾವದಿಂದ ಬಳಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದು ಪ್ರಕರಣ ದಾಖಲಾಗಿದೆ.

ಕೆಎಸ್​ಆರ್​ಟಿಸಿ ಬಸ್​ ಮತ್ತು ಕಾರಿನ ನಡುವೆ ಅಪಘಾತ: ಮೈಸೂರು – ಹುಣಸೂರು ಹೆದ್ದಾರಿಯ ಬನ್ನಿಕುಪ್ಪೆ ಬಳಿ ಕೆಎಸ್​ಆರ್​ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಬ್ಬ ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ನಡೆದಿದೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾ.ಪಂ ಸದಸ್ಯ ಲೇ. ಚಿಕ್ಕೇಗೌಡರ ಪುತ್ರ ಭಾಸ್ಕರ್(42) ಮೃತರು ಎಂದು ಗುರತಿಸಲಾಗಿದೆ. ಇವರ ಪತ್ನಿ ರಮ್ಯ, ತಾಯಿ ಸಾವಿತ್ರಮ್ಮ, ಪುತ್ರ ಚರಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಸ್ಥಳೀಯ ಗ್ರಾಮಸ್ಥರು ಧಾವಿಸಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ದು, ಸದ್ಯ ಮೈಸೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾಸ್ಕರ್ ಕಾರಿನಲ್ಲಿ ತಮ್ಮ ಕುಟುಂಬ ಸಮೇತ ಮಾವನ ಮನೆಗೆ ಹೋಗಿ ವಾಪಸ್ ಆಗುತ್ತಿದ್ದರು. ಈ ವೇಳೆ ಬನ್ನಿಕುಪ್ಪೆ ಬಳಿ ಕೆಎಸ್​ಆರ್​ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಾಸ್ಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹುಣಸೂರು ಬಸ್ ಡಿಪೋ ಮ್ಯಾನೇಜರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಬಳಿಕ ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಟ್ರಾಫಿಕ್​​ ಪೊಲೀಸರು ಅಪಘಾತಗೊಂಡ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಸ್ತೆ ಅಪಘಾತ ಮೂರು ವರ್ಷದ ಮಗು ಸೇರಿ ಮೂವರ ಸಾವು: ಚಿತ್ರದುರ್ಗಜಿಲ್ಲೆಯ ವಿಜಯಪುರದ ಗೊಲ್ಲರಹಟ್ಟಿ ಎಂಬಲ್ಲಿ ಸರಕು ಸಾಗಣೆ ಲಾರಿಗೆ ಟೊಯೋಟ ಫಾರ್ಚುನರ್​ ಕಾರು ಡಿಕ್ಕಿಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಮೂರು ವರ್ಷದ ಮಗು ಸೇರಿ ಮೂವರು ಮೃತಪಟ್ಟಿರುವ ಘಟನೆ ನಿನ್ನೆ ನಡೆದಿದೆ. ಗೋವಾ ಪ್ರವಾಸದಿಂದ ಬೆಂಗಳೂರಿಗೆ ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಇಬ್ಬರು ಮೃತ ಪಟ್ಟರೆ, ಆಸ್ಪತ್ರಗೆ ಸಾಗಿಸಿದ ಬಳಿಕ ಮೂರು ವರ್ಷದ ಮಗು ಕೊನೆಯುಸಿರೆಳೆದಿದೆ. ಮೃತರನ್ನು ತಾಯಿ ತಬ್ಸೂಮ್(28), ಪುತ್ರಿ ಫಾತಿಮಾ(03), ಸಂಬಂಧಿ ಜಾಕೀರ್ ಅಹ್ಮದ್ (60) ಎಂದು ಗುರುತಿಸಲಾಗಿದೆ. ಇನ್ನುಳಿದ ಐವರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *