ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ: ಆತ್ಮಹತ್ಯೆಗೂ ಪ್ರಚೋದನೆಗೂ ಸಾಕಷ್ಟು ಅಂತರವಿದೆ ಎಂದು ಪ್ರಕರಣ ರದ್ದು ಪಡಿಸಿ ಹೈಕೋರ್ಟ್ ಆದೇಶ

ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ: ಆತ್ಮಹತ್ಯೆಗೂ ಪ್ರಚೋದನೆಗೂ ಸಾಕಷ್ಟು ಅಂತರವಿದೆ ಎಂದು ಪ್ರಕರಣ ರದ್ದು ಪಡಿಸಿ ಹೈಕೋರ್ಟ್ ಆದೇಶ

ಆತ್ಮಹತ್ಯೆ ಮಾಡಿಕೊಂಡ ಸಮೀಪದ ದಿನಗಳಲ್ಲಿ ಪ್ರಚೋದನೆ ನೀಡಿದ್ರೆ ಮಾತ್ರೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳನ್ನು ಪರಿಗಣಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಆತ್ಮಹತ್ಯೆಗೆ ಪ್ರಚೋದನೆ ನೀಡುವ ಪ್ರಕರಣ ಸಾಬೀತಾಗಬೇಕಾದ್ರೆ ಘಟನೆಗೆ ಸಮೀಪದ ದಿನ ಪ್ರಚೋದನೆ ನೀಡಿರಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸಹೋದರನ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದ ಮೇಲೆ ತಮ್ಮ ವಿರುದ್ಧ ಪುಲಕೇಶಿ ನಗರ ಠಾಣಾ ಪೊಲೀಸರು ದಾಖಲಿಸಿರುವ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಇಂದಿರಾನಗರದ ನಿವಾಸಿ ವಿ.ವಿ. ಸಿಂಗಾರ ವೇಲು ಹಾಗೂ ಅವರ ಪತ್ನಿ ವಾಸಂತಿ ವೇಲು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಕರಣವನ್ನು ರದ್ದು ಪಡಿಸಿ ಆದೇಶಿಸಿದೆ. ಅಲ್ಲದೆ, ಮರಣ ಪತ್ರವನ್ನು ಪರಿಗಣನೆಗೆ ತೆಗೆದುಕೊಂಡರೇ ಮೃತ ವಿಕ್ರಮ್‌ಗೆ 2021ರ ಅಕ್ಟೋಬರ್‌ನಲ್ಲಿ ಅರ್ಜಿದಾರರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ವಿಕ್ರಮ್ 2021ರ ನ.23ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಯಾವ ನಿರ್ದಿಷ್ಟ ದಿನದಂದು ಬೆದರಿಕೆ ಹಾಕಲಾಗಿದೆ ಎಂಬ ಬಗ್ಗೆ ದೂರಿನಲ್ಲಿ ಹೇಳಿಲ್ಲ. ಆತ್ಮಹತ್ಯೆ ಘಟನೆ ನಡೆದ ಸಮೀಪ್ಯದಲ್ಲಿ ಪ್ರಚೋದನೆ ಕೃತ್ಯ ಸಹ ನಡೆದಿರಬೇಕು. ಆದರೆ, ಅರ್ಜಿದಾರರು ಬೆದರಿಕೆ ಹಾಕಿ ಪ್ರಚೋದನೆ ನೀಡಿದ್ದಾರೆ ಎನ್ನುವ ಘಟನೆ ಮತ್ತು ವಿಕ್ರಮ್ ಆತ್ಮಹತ್ಯೆ ಮಾಡಿಕೊಂಡ ದಿನದ ನಡುವೆ ಸಾಕಷ್ಟು ದಿನಗಳ ಅಂತರವಿದೆ. ಅಂದರೆ ಪ್ರಚೋದನೆ ಮತ್ತು ಆತ್ಮಹತ್ಯೆ ನಡುವಿನ ಸಾಮೀಪ್ಯ ತಿಳಿದು ಬಂದಿಲ್ಲ. ಜೊತೆಗೆ, ಎರಡು ಕುಟುಂಬಗಳ ನಡುವೆ ದೂರು ಮತ್ತು ಸಾಕಷ್ಟು ವ್ಯಾಜ್ಯಗಳಿವೆ ಎಂದು ಅಭಿಪ್ರಾಯಪಟ್ಟು ದಂಪತಿ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು? ಪ್ರಕರಣದ ಅರ್ಜಿದಾರ ಸಿಂಗಾರ ವೇಲು ಅವರ ಸಹೋದರನ ಪುತ್ರ ವಿಕ್ರಮ್ 2021ರ ನ.21ರಂದು ರಾತ್ರಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ವಿಕ್ರಮ್ ಮರಣ ಪತ್ರ ಬರೆದಿದ್ದರು. ‘ತಮ್ಮ ಮತ್ತು ಚಿಕ್ಕಪ್ಪ ಸಿಂಗಾರ ವೇಲು ಕುಟುಂಬದ ನಡುವೆ ಆಸ್ತಿ ವ್ಯಾಜ್ಯವಿದೆ. ಇದೇ ವಿಚಾರವಾಗಿ 2021ರ ಅಕ್ಟೋಬರ್‌ನಲ್ಲಿ ನಿಮ್ಮ ಪೋಷಕರನ್ನು ಸರ್ವನಾಶ ಮಾಡುವುದಾಗಿ ನನಗೆ ಸಿಂಗಾರ ವೇಲು ಮತ್ತವರ ಪತ್ನಿ ವಾಸಂತಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ವಿಕ್ರಮ್ ಮರಣ ಪತ್ರದಲ್ಲಿ ವಿವರಿಸಿದ್ದರು.

ಈ ಘಟನೆ ಸಂಬಂಧ ಮೃತನ ತಂದೆಯೂ ಆದ ಸಿಂಗಾರ ವೇಲುವಿನ ಅಣ್ಣ ಗಿರಿವೇಲು ಅವರು, ಪುಲಕೇಶಿ ನಗರ ಠಾಣೆಗೆ ದೂರು ನೀಡಿದ್ದರು. ನನ್ನ ಮಗನ ಸಾವಿಗೆ ಸಿಂಗಾರವೇಲು ಮತ್ತವರ ಪತ್ನಿ ಕಾರಣ ಎಂದು ದೂರು ನೀಡಿದ್ದರು. ಇದರಿಂದ ಸಿಂಗಾರ ವೇಲು ದಂಪತಿ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹಾಗಾಗಿ, ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಸೀಂಗಾರವೇಲು ದಂಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *