ಬಿಬಿಎಂಪಿ ಚುನಾವಣೆ ಸಂಬಂಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿರುವ ಬಗ್ಗೆ ಬಿಜೆಪಿ, ಜೆಡಿಎಸ್​ ವಾಗ್ದಾಳಿ ನಡೆಸುತ್ತಿವೆ.

ಅಧಿಕಾರಿಗಳ ಜತೆ ಸುರ್ಜೇವಾಲ ಸಭೆ: ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ಸಿಎಂ ಸಿದ್ದರಾಮಯ್ಯ

ಬೆಂಗಳೂರು: 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಮುನ್ನವೇ ಬಿಬಿಎಂಪಿ ಚುನಾವಣೆಯನ್ನ(BBMP Elections) ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಈ ಸಂಬಂಧ ನಿನ್ನೆ(ಜೂ.13) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್(Congress) ಉಸ್ತುವಾರಿ ಸುರ್ಜೇವಾಲಾ (Surjewala)  ನೇತೃತ್ವದಲ್ಲಿ ಚುನಾವಣಾ ಪೂರ್ವ ಸಿದ್ದತೆಗಳ ಕುರಿತಾಗಿ ಚರ್ಚೆ ನಡೆದಿತ್ತು. ಈ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸಹ ಪಾಲ್ಗೊಂಡಿರುವುದಕ್ಕೆ ಬಿಜೆಪಿ(BJP), ಜೆಡಿಎಸ್​ ಕೆಂಡಾಮಂಡಲವಾಗಿದೆ. ಆ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah) ‘ಸುರ್ಜೇವಾಲ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ನಿನ್ನೆ ಅಧಿಕೃತವಾಗಿ ಸಭೆ ನಡೆಸಿಲ್ಲ ಎಂದಿದ್ದಾರೆ.

ರಣದೀಪ್​​ ಸುರ್ಜೇವಾಲ ಶಾಂಗ್ರಿಲಾ ಹೋಟೆಲ್​​ನಲ್ಲಿ ಇದ್ದರು. ಈ ವೇಳೆ ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚಿಸಲು ಶಾಸಕರನ್ನು ಕರೆದಿದ್ದರು. ಇದೇ ಕಾರಣಕ್ಕೆ ಸುರ್ಜೇವಾಲ ಭೇಟಿಯಾಗಲು ಡಿ.ಕೆ.ಶಿವಕುಮಾರ್​ ಸೇರಿದಂತೆ ಅನೇಕ ಸಚಿವರು ಹೋಗಿದ್ದರು. ಜೊತೆಗೆ ಸಿಟಿರೌಂಡ್ಸ್​​ ಬಗ್ಗೆ ಡಿಕೆಶಿಯವರನ್ನ ಭೇಟಿಯಾಗಲು ಅಧಿಕಾರಿಗಳು ಬಂದಿದ್ದರು. ಈ ಕುರಿತು ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಡುವುದಾದ್ರೆ ಕೊಡಲಿ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಭೆ ವಿಚಾರವಾಗಿ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ

ಇನ್ನು ಅಧಿಕಾರಿಗಳ ಜತೆ ರಾಜ್ಯ ‘ಕೈ’​ ಉಸ್ತುವಾರಿ ಸುರ್ಜೇವಾಲ ಸಭೆ ವಿಚಾರ ‘ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹೌದು ‘ಅಧಿಕಾರಿಗಳಿಗೆ ಸುರ್ಜೇವಾಲ ಏನು ಸೂಚನೆ ಕೊಟ್ಟಿದ್ದಾರೆ ಗೊತ್ತಿದೆ. ಎಷ್ಟು ದಿನ ಈ ರೀತಿಯ ಸುಳ್ಳುಗಳನ್ನು ಹೇಳಿಕೊಂಡು ಬದುಕುತ್ತೀರಾ?, ಜನ ಮತ ಹಾಕಿದ್ದು ನಿಮಗೋ, ದಶಪಥ ಕಾಂಗ್ರೆಸ್ ಹೈಕಮಾಂಡ್ಗೋ?. ಎಂತಹ ದುರ್ಗತಿ ಬಂದಿದೆ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ಹೈಕಮಾಂಡ್​ ಹಂಗಿನಾ ಸರ್ಕಾರ ಆಗಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಲೂಟಿ ಮಾಡಲು ದೆಹಲಿಯಿಂದ ಬಂದಿರುವ ಪ್ರತಿನಿಧಿ ಎಂದ ಕುಮಾರಸ್ವಾಮಿ

ಸಭೆಯಲ್ಲಿದ್ದ ನಿಮ್ಮ ಮಂತ್ರಿಯೇ ಆ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯ ಲೂಟಿ ಮಾಡಲು ದೆಹಲಿಯಿಂದ ಬಂದಿರುವ ಪ್ರತಿನಿಧಿ ಇವರು, ‘ಕೈ’ ನಾಯಕರಿಗೆ ಡೈರಕ್ಷನ್ ಕೊಟ್ಟು ಲೂಟಿ ಮಾಡಲು ಬಂದಿದ್ದಾರೆ. 2 ರಾಷ್ಟ್ರೀಯ ಪಕ್ಷಗಳು ಇರುವುದೇ ರಾಜ್ಯವನ್ನು ಲೂಟಿ ಹೊಡೆಯೋಕೆ ಎನ್ನುವ ಮೂಲಕ ಕಾಂಗ್ರೆಸ್​ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರತಾಪ್​ ಸಿಂಹ ಆರೋಪಕ್ಕೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್​, ಬಿಜೆಪಿಯಿಂದ ಹೊಂದಾಣಿಕೆ ರಾಜಕಾರಣ ಆರೋಪ ಮಾಡಿದ ವಿಚಾರವಾಗಿ‘ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದು ಯಾರು?, ನಾನು ವಿರೋಧ ಪಕ್ಷದವರ ಜತೆ ರಾಜಕೀಯವಾಗಿ ಮಾತನಾಡಲ್ಲ. ಸಂಸದ ಪ್ರತಾಪ್ ಸಿಂಹ ಎಳಸು ಮನುಷ್ಯ, ಆತನಿಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಮೈಸೂರು-ಬೆಂಗಳೂರು ಹೈವೇ ಮಾಡಿಸಿದ್ದು ನಾನೇ ಅಂತಾರೆ ಎಂದು ಪ್ರತಾಪ್​ ಸಿಂಹ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *