ಆಡಳಿತ ಸುಧಾರಣಾ ಆಯೋಗದಿಂದ ಪ್ರಮುಖ 21 ಅಂಶಗಳನ್ನ ಒಳಗೊಂಡಿರುವ ವರದಿಯನ್ನು ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್​ ವರದಿ ಸಲ್ಲಿಸಿದ್ದು, ವರದಿ ಅನುಷ್ಠಾನ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ಬೆಂಗಳೂರು: ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸೇವೆಗಳಲ್ಲಿ ಪರಿಣಾಮಕಾರಿಯಾಗಿ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಆಡಳಿತ ಸುಧಾರಣಾ ಆಯೋಗ -2 ಹಲವು ಶಿಫಾರಸ್ಸುಗಳನ್ನ ಮಾಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ಅವರನ್ನ ಇಂದು ಭೇಟಿ ಮಾಡಿದ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ್ ಭಾಸ್ಕರ್ (Vijay Bhaskar) ಪ್ರಮುಖ 21 ಅಂಶಗಳನ್ನ ಒಳಗೊಂಡಿರುವ ವರದಿ ಸಲ್ಲಿಕೆ ಮಾಡಿದರು.

ವರದಿ ಸ್ವೀಕರಿಸಿದ ಬಳಿಕ ವಿಜಯ್ ಭಾಸ್ಕರ್ ಅವರೊಂದಿಗೆ ವರದಿಯ ಅಂಶಗಳ ಕುರಿತು ಚರ್ಚೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎರಡು ಮೂರು ಹಂತಗಳಲ್ಲಿ ವರದಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು. ವರದಿಯಲ್ಲಿರುವ ಕೆಲವು ಶಿಫಾರಸ್ಸುಗಳನ್ನ ಆರೋಗ್ಯ ಇಲಾಖೆ ಈ ಬಾರಿಯ ಬಜೆಟ್ ನಲ್ಲೇ ಅನುಷ್ಠಾನಗೊಳಿಸುತ್ತಿದೆ.

ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಎಂ.ಬಿ.ಬಿ.ಎಸ್ ವೈದ್ಯರನ್ನ ನಗರ ಪ್ರದೇಶಗಳಿಗೂ ಬಳಸಿಕೊಳ್ಳಲು ಈ ಬಾರಿಯ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಕೋರ್ಸ್ ಗಳನ್ನ ಈಗಾಗಲೇ ಕೆ.ಸಿ ಜನರಲ್ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗಿದೆ. ತಾಲೂಕು ಮಟ್ಟದ ಪ್ರಮುಖ ಆಸ್ಪತ್ರೆಗಳಲ್ಲಿ ನರ್ಸಿಂಗ್ ಕೋರ್ಸ್ ಪ್ರಾರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ವರದಿಯ ಪ್ರಮುಖ ಅಂಶಗಳು ಹೀಗಿವೆ

  • ಆರೋಗ್ಯ ಇಲಾಖೆಯಲ್ಲಿ ನರ್ಸರಿಂಗ್ ನಿರ್ದೇಶನಾಲಯ ಸ್ಥಾಪನೆಗೆ ಶಿಫಾರಸ್ಸು.
  • ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಎಂಬಿಬಿಎಸ್‌ ವೈದ್ಯರನ್ನು ನಗರ ಪ್ರದೇಶಗಳಲ್ಲೂ ಬಳಕೆಗೆ ಸೂಚನೆ.
  • ಕೇಂದ್ರ ವೈದ್ಯಕೀಯ ಸಂಸ್ಥೆಗಳ ಮಾದರಿಯಲ್ಲಿ ಎಲ್ಲಾ ಸರ್ಕಾರಿ ವೈದ್ಯರ ಖಾಸಗಿ ಅಭ್ಯಾಸ ನಿಷೇಧ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಜೆ ಒಪಿಡಿಗಳನ್ನು ಸಹ ಪ್ರಾರಂಭಿಸಲು ಸಲಹೆ.
  • ತಾಲ್ಲೂಕು ಆಸ್ಪತ್ರೆಗಳಲ್ಲಿ ಒಳರೋಗಿಗಳು ಮತ್ತು ಹೆರಿಗೆಗಳ ಸಂಖ್ಯೆಯನ್ನು ಅವಲಂಬಿಸಿ, ಹೆಚ್ಚಿನ ಕೆಲಸದ ಹೊರೆ ಹೊಂದಿರುವ ತಾಲ್ಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 50 ಹೊಸ ಸಾಮಾನ್ಯ ಹಾಸಿಗೆಗಳನ್ನು ಮಂಜೂರು ಮಾಡಲು ಶಿಫಾರಸ್ಸು‌
  • ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗ ತಜ್ಞ, ಮಕ್ಕಳ ವೈದ್ಯರು, ಅರಿವಳಿಕೆ ತಜ್ಞರು, ದಂತ ಶಸ್ತ್ರಚಿಕಿತ್ಸಕರು ವಾರಕ್ಕೊಮ್ಮೆ ಗಂಟೆಯ ಆಧಾರದ ಮೇಲೆ ಮತ್ತು ಮೂಳೆ ಚಿಕಿತ್ಸಕ, ಮನೋವೈದ್ಯರು, ಫಿಸಿಯೋಥೆರಪಿಸ್ಟ್, ಜೆರಿಯಾಟ್ರಿಶಿಯನ್ ತಿಂಗಳಿಗೊಮ್ಮೆ ಗಂಟೆಯ ಆಧಾರದ ಮೇಲೆ ತಜ್ಞರ ಸೇವೆಗಳನ್ನು ಪಡೆಯಲು ಎಆರ್​ಎಸ್‌ಗೆ ಹಣವನ್ನು ಒದಗಿಸಬಹುದು.
  • ಎಲ್ಲಾ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಡಳಿತಾಧಿಕಾರಿಯ ಅಡಿಯಲ್ಲಿ ಆಸ್ಪತ್ರೆ ವ್ಯವಸ್ಥಾಪಕರ ಹುದ್ದೆ ನೇಮಕಕ್ಕೆ ಸಲಹೆ.
  • ಎಎನ್‌ಎಂಗಳು ಮತ್ತು ಪುರುಷ ಆರೋಗ್ಯ ಕಾರ್ಯಕರ್ತರು ದ್ವಿ-ಚಕ್ರ ವಾಹನಗಳನ್ನು ಖರೀದಿಸಲು 20 ಕೋಟಿ ವೆಚ್ಚದಲ್ಲಿ ಶೇ.50ರ ಸಬ್ಸಿಡಿ ನೀಡಿ.
  • 100 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಆಸ್ಪತ್ರೆಗಳಲ್ಲಿ GNM ಅಥವಾ B.Sc ನರ್ಸಿಂಗ್ ಕೋರ್ಸ್‌ಗಳ 20 ಸೀಟ್‌ಗಳೊಂದಿಗೆ ನರ್ಸಿಂಗ್ ಕಾಲೇಜು ಹಾಗೂ 10 ಪ್ಯಾರಾಮೆಡಿಕಲ್ ಸೀಟುಗಳೊಂದಿಗೆ ಪ್ಯಾರಾ ಮೆಡಿಕಲ್‌ ಕೋರ್ಸ್‌ಗಳನ್ನು ಪ್ರಾರಂಭಿಸುವುದು.
  • ವಿಭಾಗಿಯ ಮಟ್ಟದಲ್ಲಿ ಸಿಸ್ಟಂ ಇಂಪ್ರೂಮೆಂಟ್ ಟೀಮ್ (ಎಸ್‌ಐಟಿ) ರಚನೆ. ವೈದ್ಯರು, ಸಾರ್ವಜನಿಕ ಆರೋಗ್ಯ ತಜ್ಞರು, ನಸಿರ್ಂಗ್ ಅಧಿಕಾರಿ, ಆರೋಗ್ಯ ತಪಾಸಣಾ ಅಧಿಕಾರಿಗಳನ್ನ ಒಳಗೊಂಡ ಟೀಂ ರಚನೆಗೆ ಸಲಹೆ.‌
  • ಪ್ರತಿ ಬುಧವಾರ ತಾಯಿಯ ಆರೋಗ್ಯ, ಮರಣ ಪ್ರಮಾಣ ಕುರಿತು ಇಲಾಖೆಯಿಂದ ಸ್ಕ್ರೀನಿಂಗ್​ಗೆ ಸೂಚನೆ.
  • ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಜೆ ಕ್ಲಿನಿಕ್‌ಗಳನ್ನು ತೆರೆಯಲು ಸೂಕ್ತ ಪ್ರಸ್ಥಾವನೆ.
  • ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆಯಡಿ ವಿಕಲಚೇತನರಿಗೆ ಚಿಕಿತ್ಸೆ.
  • ಪುರುಷ ಆರೋಗ್ಯ ಕಾರ್ಯಕರ್ತರಿಗೆ ಡ್ರೆಸ್ ಕೋಡ್ ಕಡ್ಡಾಯ.
  • ಆಯುಷ್ ಇಲಾಖೆ-ಸರ್ಕಾರಿ ಕೇಂದ್ರ ಔಷಧಾಲಯಕ್ಕೆ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ, ಸಾಂಬಾರ ಮಂಡಳಿ, ಲ್ಯಾಂಪ್ಸ್ ಸೊಸೈಟಿಗಳು, ಕೆಎಂಎಫ್ ಮತ್ತು ಇತರ ರಾಜ್ಯ ಅಥವಾ ಕೇಂದ್ರ ಸರ್ಕಾರ ಅಥವಾ ಅರೆ ಸರ್ಕಾರಿ ಸಂಸ್ಥೆಗಳಿಂದ ನೇರವಾಗಿ ಕಚ್ಚಾ ಸಾಮಗ್ರಿಗಳು ಮತ್ತು ಔಷಧಿಗಳನ್ನು ಖರೀದಿಸಲು ಕೆಟಿಟಿಪಿ ಕಾಯಿದೆಯ ಸೆಕ್ಷನ್ 4 ರ ಅಡಿಯಲ್ಲಿ ವಿನಾಯಿತಿ ನೀಡಬಹುದು.
  • ವಿಶೇಷ ಕೌಶಲಗಳನ್ನು ಹೊಂದಿರುವ ಆಯುಷ್ ಪಿಜಿ ವೈದ್ಯರ ಸೇವೆಯನ್ನೂ, ಔಷಧಾಲಯಗಳ ಬದಲು ಆಯುಷ್ ಆಸ್ಪತ್ರೆಗಳಿಗೆ ಮಾತ್ರ ನಿಯೋಜನೆಗೆ ನಿರ್ಧಾರ ಕೈಗೊಳ್ಳಲು ಸಲಹೆ ನೀಡಲಾಗಿದೆ.

Leave a Reply

Your email address will not be published. Required fields are marked *