Wrestlers Protest Against Brij Bhushan Sharan Singh: ಭಾರತೀಯ ಕುಸ್ತಿ ಸಂಸ್ಥೆ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದ ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ತಂದೆ, ಈಗ ಉಲ್ಟಾ ಹೊಡೆದಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ತಾವು ಮಾಡಿರುವ ಆರೋಪಗಳು ಸುಳ್ಳು ಎಂದು ಅವರು ತಿಳಿಸಿದ್ದಾರೆ. ಮಗಳು ಸೋತಿದ್ದ ಕೋಪದಿಂದ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾಗಿ ಹೇಳಿದ್ದಾರೆ.

FIR against WFI chief

ಹೈಲೈಟ್ಸ್‌:

  • ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾಗಿ ತಪ್ಪೊಪ್ಪಿಗೆ
  • ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ದೂರು ನೀಡಿದ್ದಾಗಿ ಬಾಲಕಿಯ ತಂದೆ ಹೇಳಿಕೆ
  • ಮಗಳಿಗೆ ಆದ ಅನ್ಯಾಯದ ವಿರುದ್ಧದ ತನಿಖೆಗೆ ಸರ್ಕಾರ ಒಪ್ಪಿಕೊಂಡಿದೆ ಎಂದ ತಂದೆ

ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಸಂಸ್ಥೆ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಬ್ರಿಜ್ ಭೂಷಣ್ ವಿರುದ್ಧ ಉದ್ದೇಶಪೂರ್ವಕವಾಗಿ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾಗಿ ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ತಂದೆ ಹೇಳಿದ್ದಾರೆ. ತಮ್ಮ ಮಗಳ ವಿರುದ್ಧ ಆದ ಅನ್ಯಾಯಕ್ಕೆ ವಿಚಾರದಲ್ಲಿ ಡಬ್ಲ್ಯೂಎಫ್‌ಐ ಮುಖ್ಯಸ್ಥರ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದೊಂದಿಗೆ ಈ ಆರೋಪ ಮಾಡಿದ್ದಾಗಿ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.

ಮಹಿಳಾ ಸ್ಪರ್ಧಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಳೆದ ಆರು ತಿಂಗಳಿನಿಂದ ದೇಶದ ಕೆಲವು ಪ್ರಮುಖ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ತಂದೆ ಇದು ಸುಳ್ಳು ಆರೋಪ ಎಂದು ಹೇಳಿರುವುದು, ಬ್ರಜ್ ಭೂಷಣ್ ವಿರುದ್ಧದ ಪ್ರಕರಣವನ್ನು ದುರ್ಬಲಗೊಳಿಸಲಿದೆ.

ಅಪ್ರಾಪ್ತ ವಯಸ್ಕೆಯಾಗಿರುವ ಕುಸ್ತಿಪಟು ನೀಡಿದ್ದ ಲೈಂಗಿಕ ದೌರ್ಜನ್ಯದ ದೂರು ಪೋಕ್ಸೋ ಕಾಯ್ದೆ ಅಡಿ ತನಿಖೆಗೆ ಒಳಪಟ್ಟಿತ್ತು. ಈ ಪ್ರಕರಣ ಸಾಬೀತಾದರೆ ಬ್ರಿಜ್ ಭೂಷಣ್ ಅವರಿಗೆ ಗರಿಷ್ಠ ಶಿಕ್ಷೆಯಾಗುವ ಸಾಧ್ಯತೆ ಇತ್ತು.

ಈಗಲೇ ಸತ್ಯ ಹೊರಬರುವುದು ಒಳಿತು

ಇಷ್ಟು ದಿನ ಆರೋಪ ಮಾಡಿ, ಇದ್ದಕ್ಕಿದ್ದಂತೆ ಕಥೆ ಬದಲಿಸುತ್ತಿರುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ, “ನ್ಯಾಯಾಲಯದ ಬದಲು ಈಗಲೇ ಸತ್ಯ ಹೊರಗೆ ಬರುವುದು ಒಳ್ಳೆಯದು” ಎಂದು ಬಾಲಕಿಯ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿಯ ಅಪ್ರಾಪ್ತ ವಯಸ್ಸಿನ ಮಗಳ ಗುರುತನ್ನು ಕಾಪಾಡಬೇಕಿರುವ ಕಾರಣ ಅವರ ಹೆಸರನ್ನು ಬಹಿರಂಗಪಡಿಸಿಲ್ಲ.

ಬಾಲಕಿ ತಂದೆ ನೀಡಿದ್ದ ದೂರು ಸೇರಿದಂತೆ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನೂ ಬ್ರಿಜ್ ಭೂಷಣ್ ನಿರಾಕರಿಸಿತ್ತಾ ಬಂದಿದ್ದರು. ಈಗ ಸಿಂಗ್ ವಿರುದ್ಧದ ತಮ್ಮ ಹಾಗೂ ಮಗಳ ಹಗೆತನದ ಮೂಲವನ್ನು ಬಾಲಕಿಯ ತಂದೆ ವಿವರವಾಗಿ ತಿಳಿಸಿದ್ದಾರೆ.

ರೆಫರಿ ಮಾಡಿದ್ದ ಮೋಸ

2022ರಲ್ಲಿ ಲಖನೌದಲ್ಲಿ ಅಂಡರ್- 17 ಏಷ್ಯನ್ ಚಾಂಪಿಯನ್‌ಶಿಪ್ ಟ್ರಯಲ್ಸ್ ಫೈನಲ್‌ನಲ್ಲಿ ಈ ಬಾಲಕಿ ಸೋತಿದ್ದಳು. ಇದರಿಂದ ಭಾರತ ತಂಡಕ್ಕೆ ಆಯ್ಕೆಯಾಗುವುದು ತಪ್ಪಿತ್ತು. ಅದೇ ಈಗ ಮಾಡಿರುವ ಆರೋಪಗಳಿಗೆ ಮೂಲ ಕಾರಣ. ಫೈನಲ್ ಪಂದ್ಯದಲ್ಲಿ ರೆಫರಿ ನೀಡಿದ ನಿರ್ಣಯದಿಂದಾಗಿ ತಮ್ಮ ಮಗುವಿನ ಒಂದು ವರ್ಷದ ಕಠಿಣ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಆಯ್ತು ಎನ್ನುವುದು ತಮ್ಮಲ್ಲಿ ಕೋಪ ಮೂಡಿಸಿತ್ತು ಎಂದು ಅವರು ಹೇಳಿದ್ದಾರೆ.

“ಅಂತಿಮ ಪಂದ್ಯವು ದಿಲ್ಲಿಯ ಕುಸ್ತಿಪಟು ವಿರುದ್ಧ ಇತ್ತು. ಇದರಲ್ಲಿ ಯುಡಬ್ಲ್ಯೂಡಬ್ಲ್ಯೂ ಹಾಗೂ ಡಬ್ಲ್ಯೂಎಫ್‌ಐನ ನಿಯಮಗಳನ್ನು ಪಾಲಿಸಿರಲಿಲ್ಲ. ದಿಲ್ಲಿ ಕುಸ್ತಿಪಟು ವಿರುದ್ಧ ನನಗೆ ಯಾವುದೇ ಹಗೆ ಇಲ್ಲ. ಆಕೆ ಕೂಡ ನನ್ನ ಮಗಳಂತೆ. ಆದರೆ ರೆಫರಿ ಕೂಡ ದಿಲ್ಲಿಯವರಾಗಿದ್ದು, ಉದ್ದೇಶಪೂರ್ವಕವಾಗಿ ನನ್ನ ಮಗಳನ್ನು ಸೋಲಿಸಿದ್ದರು” ಎಂದು ವಿವರಿಸಿದ್ದಾರೆ.

ರೆಫರಿ ಪಕ್ಷಪಾತ ಮಾಡಿದ್ದರೆ ನಿಮ್ಮ ಕೋಪವನ್ನು ಸಿಂಗ್ ಮೇಲೆ ತೋರಿಸುತ್ತಿರುವುದು ಏಕೆ ಎಂಬ ಪ್ರಶ್ನೆಗೆ, “ರೆಫರಿಯನ್ನು ನಿಯೋಜನೆ ಮಾಡಿದವರು ಯಾರು? ಕುಸ್ತಿ ಸಂಸ್ಥೆ. ಕುಸ್ತಿ ಸಂಸ್ಥೆಯ ಮುಖ್ಯಸ್ಥರು ಯಾರು? ಹಾಗಾದರೆ ನಾನು ಯಾರ ವಿರುದ್ಧ ಕೋಪಗೊಳ್ಳಬೇಕು?” ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಕೇವಲ ಒಂದು ಪಂದ್ಯದಲ್ಲಿ ಸೋತಿದ್ದಕ್ಕೆ ಕುಸ್ತಿ ಸಂಸ್ಥೆ ಮುಖ್ಯಸ್ಥರ ವಿರುದ್ಧ ಇಷ್ಟು ಗಂಭೀರವಾದ ಆರೋಪ ಹೊರಿಸಿದ್ದು ಏಕೆ ಎಂದು ಕೇಳಿದಾಗ, ಅವರು ತಮ್ಮದೇ ಆಯಾಮವನ್ನು ಮುಂದಿಟ್ಟರು.

ಒಂದು ವರ್ಷದ ಶ್ರಮ ವ್ಯರ್ಥವಾಯ್ತು

“ನಿಮಗೆ ಇದು ಕೇವಲ ಒಂದು ಪಂದ್ಯ. ಬಹುಶಃ ನಿಮಗೆ ಇದರಿಂದ ಆಗಬೇಕಿದ್ದು ಏನೂ ಇಲ್ಲ. ಆದರೆ ಇದು ನನ್ನ ಮಗಳ ಒಂದು ವರ್ಷದ ಕಠಿಣ ಪರಿಶ್ರಮ. ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಸಾಕಷ್ಟು ಶ್ರಮಪಟ್ಟು, ಪ್ರತಿದಿನ ಗಂಟೆಗಟ್ಟಲೆ ಅಭ್ಯಾಸ ನಡೆಸಿ ಅಖಾಡಕ್ಕೆ ಮರಳಿದ ಮಗುವಿಗೆ ಒಂದು ಪಂದ್ಯದ ಮೌಲ್ಯ ಏನೆಂದು ಗೊತ್ತಿರುತ್ತದೆ” ಎಂದು ನೋವಿನಿಂದ ಹೇಳಿದ್ದಾರೆ.

“ಕುಸ್ತಿಪಟುವಿನ ತಂದೆಗೆ ಒಂದು ಪಂದ್ಯದ ಮಹತ್ವ ತಿಳಿದಿರುತ್ತದೆ. ಏಕೆಂದರೆ ಒಂದು ಸ್ಪರ್ಧೆಯಿಂದ ನಾವು ನಾಲ್ಕು ಅಂತಾರಾಷ್ಟ್ರೀಯ ಪ್ರವಾಸಗಳನ್ನು ಕಳೆದುಕೊಂಡೆವು, ಬಹುಶಃ ನಾಲ್ಕು ಪದಕಗಳನ್ನೂ” ಎಂದಿದ್ದಾರೆ.

ಅದು ರಹಸ್ಯವಾಗಿಯೇ ಇರಲಿ!

ರೋಹ್ಟಕ್ ಮೂಲದ ವ್ಯಕ್ತಿ, ಪ್ರತಿಭಟನೆ ನಡೆಸುತ್ತಿರುವ ಇತರೆ ಕುಸ್ತಿಪಟುಗಳಿಂದ ತಾವು ಮತ್ತು ತಮ್ಮ ಮಗಳು ಪ್ರಭಾವಿತಗೊಂಡಿಲ್ಲ ಎಂದು ಹೇಳಿದ್ದಾರೆ. “ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ನಾವು ತಪ್ಪು ಮಾಡಿದ್ದೇವೆ ಮತ್ತು ಇದು ನಮ್ಮ ನಿರ್ಧಾರ. ಅವರು ಕೂಡ ತಪ್ಪು ಮಾಡಿದ್ದಾರೆ. ತಪ್ಪು ಎಂದಿಗೂ ತಪ್ಪೇ” ಎಂದಿದ್ದಾರೆ.

ತಾವು ಹಾಗೂ ಪ್ರತಿಭಟನಾನಿರತ ಕುಸ್ತಿಪಟುಗಳ ನಡುವೆ ಹೊಂದಾಣಿಕೆ ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. “ಕೆಲವು ಸಂಗತಿಗಳು ರಹಸ್ಯವಾಗಿಯೇ ಇರಲಿ. ಕೆಲವು ತೀರಾ ವೈಯಕ್ತಿಕವಾದ ವಿಚಾರಗಳಿವೆ” ಎಂದು ಹೇಳಿದ್ದಾರೆ.

ತಮ್ಮ ಮನಸ್ಸು ಬದಲಿಸಲು ಮತ್ತು ಆರೋಪಗಳನ್ನು ಹಿಂದಕ್ಕೆ ಪಡೆಯಲು ಕಾರಣವೇನು ಎಂಬುದಕ್ಕೆ, ಅಧಿಕಾರಿಗಳಿಂದ ಭರವಸೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. “ಈಗ ಮಾತುಕತೆಗಳು ಶುರುವಾಗಿವೆ. ಕಳೆದ ವರ್ಷದ ಚಾಂಪಿಯನ್‌ಶಿಪ್ ಟ್ರಯಲ್ಸ್‌ನಲ್ಲಿ ನನ್ನ ಮಗಳ ಸೋಲಿನ ಬಗ್ಗೆ ನ್ಯಾಯಸಮ್ಮತ ತನಿಖೆ ನಡೆಸುವುದಾಗಿ ಸರ್ಕಲಾರ ಭರವಸೆ ನೀಡಿದೆ. ಹೀಗಾಗಿ ನನ್ನ ತಪ್ಪುಗಳನ್ನು ಸರಿಪಡಿಸುವುದು ಕೂಡ ನನ್ನ ಕರ್ತವ್ಯ ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *