Cost Of Implementing 5 Guarantees In Karnataka: ಈ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ಸರ್ಕಾರಕ್ಕೆ ಒಂದು ವರ್ಷಕ್ಕೆ ಸುಮಾರು 45,000ದಿಂದ 65,000 ಕೋಟಿ ರೂವರೆಗೂ ಹೆಚ್ಚುವರಿ ಹೊರೆಬೀಳುತ್ತದೆ. ಇಷ್ಟು ಹಣವನ್ನು ಹೊಂದಿಸುವ ಬಹುದೊಡ್ಡ ಸವಾಲು ಕಾಂಗ್ರೆಸ್ ಸರ್ಕಾರದ ಮೇಲಿದೆ.

ಬೆಂಗಳೂರು: ನಿರೀಕ್ಷೆಯಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ನೀಡಿದ್ದ 5 ಗ್ಯಾರಂಟಿಗಳ (Guarantee Schemes) ಆಶ್ವಾಸನೆಯನ್ನು ಈಡೇರಿಸುವುದಾಗಿ ಹೇಳಿದೆ. ಸಿಎಂ ಸಿದ್ದರಾಮಯ್ಯ ಜೂನ್ 2ರಂದು ಸುದ್ದಿಗೋಷ್ಠಿ ಕರೆದು, ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಗಳನ್ನು ಸರ್ಕಾರ ಈ ಆರ್ಥಿಕ ವರ್ಷ ಮುಗಿಯುವುದರೊಳಗೆ ಜಾರಿಗೆ ತರಲಿದೆ. ಈ ಐದು ಯೋಜನೆಗಳನ್ನು ಯಾವ ಜಾತಿ, ಧರ್ಮ, ಭಾಷೆಯ ಭೇದವಿಲ್ಲದೇ ಜಾರಿಗೆ ತರುತ್ತಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

ಗೃಹ ಜ್ಯೋತಿ ಯೋಜನೆಯಲ್ಲಿ ಪ್ರತೀ ಮನೆಗೂ 100 ಯೂನಿಟ್​ಗಳವರೆಗೂ ವಿದ್ಯುತ್ ನೀಡಲಾಗುತ್ತದೆ. ಗೃಹ ಲಕ್ಷ್ಮೀ ಯೋಜನೆಯಲ್ಲಿ ಕುಟುಂಬದ ಒಬ್ಬ ಹೆಣ್ಣಿಗೆ (ಯಜಮಾನಿ) ತಿಂಗಳಿಗೆ 2,000 ರೂ ನೀಡಲಅಗುತ್ತದೆ. ಶಕ್ತಿ ಯೋಜನೆಯಲ್ಲಿ ರಾಜ್ಯದ ಎಸಿ, ಐಷಾರಾಮಿ ಬಸ್ಸು ಹೊರತಪಡಿಸಿ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದೊಳಗೆ ಎಲ್ಲಿ ಬೇಕಾದರೂ ಉಚಿತವಾಗಿ ಓಡಾಡಬಹುದು. ಇನ್ನು, ಅನ್ನ ಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ 10 ಕಿಲೋ ಅಕ್ಕಿ ಅಥವಾ ಆಹಾರಧಾನ್ಯ ಕೊಡಲಾಗುತ್ತದೆ. ಯುವ ನಿಧಿ ಯೋಜನೆಯಲ್ಲಿ ನಿರುದ್ಯೋಗಿ ಪದವೀಧರರಿಗೆ 1,500ರಿಂದ 3,000 ರೂ ಸಹಾಯಧನ ಕೊಡಲಾಗುತ್ತದೆ.

ಈ ಗ್ಯಾರಂಟಿಗಳ ಜಾರಿಗೆ ಎಷ್ಟು ಖರ್ಚಾಗುತ್ತದೆ?

ಒಂದು ಅಂದಾಜು ಪ್ರಕಾರ ಕಾಂಗ್ರೆಸ್​ನ ಈ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ಸರ್ಕಾರಕ್ಕೆ ಒಂದು ವರ್ಷಕ್ಕೆ ಸುಮಾರು 45,000ದಿಂದ 65,000 ಕೋಟಿ ರೂವರೆಗೂ ಹೆಚ್ಚುವರಿ ಹೊರೆಬೀಳುತ್ತದೆ. ಇಷ್ಟು ಹಣವನ್ನು ಹೊಂದಿಸುವ ಬಹುದೊಡ್ಡ ಸವಾಲು ಕಾಂಗ್ರೆಸ್ ಸರ್ಕಾರದ ಮೇಲಿದೆ.

ಈ ಬಾರಿಯ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ 60,000 ಕೋಟಿ ರೂನಷ್ಟು ವಿತ್ತೀಯ ಕೊರತೆ ಎದುರಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ 3 ಲಕ್ಷ ಕೋಟಿ ರೂ ಗಾತ್ರದ್ದಾಗಿತ್ತು. ಈಗ 5 ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಸರ್ಕಾರಕ್ಕೆ ಆಗುವ ವಿತ್ತೀಯ ಕೊರತೆ 1ಲಕ್ಷ ಕೋಟಿ ರೂ ದಾಟಬಹುದು.

ಗ್ಯಾರಂಟಿಗಳ ಹೊರೆ ಇಳಿಸಲು ಹಣಕಾಸು ವ್ಯವಸ್ಥೆ ಹೇಗೆ?

ಐದು ಗ್ಯಾರಂಟಿಗಳನ್ನು ಜಾರಿಗೆ ತಂದರೆ ಸರ್ಕಾರಕ್ಕೆ ಸಾಕಷ್ಟು ಹೊರೆ ಹೆಚ್ಚುತ್ತದೆ. ಇದಕ್ಕೆ ಸರ್ಕಾರ ಸಂಪನ್ಮೂಲ ಹೇಗೆ ಕ್ರೋಢೀಕರಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯರೇ ಹಣಕಾಸು ಖಾತೆ ಹೊಂದಿರುವುದರಿಂದ ಅವರು ಈ ಬಗ್ಗೆ ಸಾಕಷ್ಟು ಯೋಚಿಸಿ ತೀರ್ಮಾನಕ್ಕೆ ಬಂದಿರಬಹುದು. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಪೆಟ್ರೋಲ್ ಮೇಲಿನ ಸುಂಕ ಹೆಚ್ಚಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಗ್ಯಾರಂಟಿಗಳ ಈಡೇರಿಕೆಗೆ ಹಣ ಕ್ರೋಢೀಕರಿಸಲು ಸರ್ಕಾರ ಏನು ಮಾಡಬಹುದು?

  • ಪೆಟ್ರೋಲ್ ಮೇಲಿನ ಸುಂಕ 5 ರೂನಷ್ಟು ಏರಿಕೆ ಆಗಬಹುದು.
  • ಕೈಗಾರಿಕೆಗಳಿಗೆ ನೀಡುವ ವಿದ್ಯುತ್​ನ ದರ ಹೆಚ್ಚಿಸಬಹುದು
  • ಬೆಂಗಳೂರಿನಲ್ಲಿ ಪ್ರಾಪರ್ಟಿ ಟ್ಯಾಕ್ಸ್ ದರ ಹೆಚ್ಚಿಸಬಹುದು.
  • ಆಸ್ತಿ ಮಾರಾಟದಲ್ಲಿ ಗೈಡೆನ್ಸ್ ವ್ಯಾಲ್ಯೂ ಹೆಚ್ಚಿಸಬಹುದು
  • ತೀರಾ ಅನಗತ್ಯ ಯೋಜನೆಗಳನ್ನು ಕೈಬಿಡಬಹುದು
  • ಇತರ ಆಯ್ದ ಯೋಜನೆಗಳ ಬಜೆಟ್ ಕಡಿಮೆ ಮಾಡಬಹುದು.

Leave a Reply

Your email address will not be published. Required fields are marked *