ರಾಮನಗರ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ (Congress Guarantee) ವಿಚಾರವಾಗಿ ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ಪತ್ರ ಬರೆಯಿರಿ, ಒದ್ದು ಒಳಗೆ ಹಾಕಿಸುತ್ತೇನೆ ಎಂದು ಡಿಸಿಎಂ (Deputy CM) ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.

ಕನಕಪುರದ (Kanakapur) ಕಬ್ಬಾಳು ಗ್ರಾಮದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗಲಿದೆ. ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ರೂ. ಕೊಡುತ್ತೇವೆ. ಯಾರು ಯಜಮಾನಿ ಎಂದು ನೀವು ತೀರ್ಮಾನ ಮಾಡಿಕೊಳ್ಳಬೇಕು. ಅಲ್ಲದೆ ಈ ಯೋಜನೆಗೆ ಹೆಣ್ಣುಮಕ್ಕಳ ಅಕೌಂಟ್ ನಂಬರನ್ನೇ ಕೊಡಬೇಕು. ಈ ಯೋಜನೆಗಳಿಗೆ ಜೂ.15ರಿಂದ ಜು.15ರ ವರೆಗೆ ಅರ್ಜಿ ಹಾಕಬೇಕು. ಯಾರಿಗೂ ಲಂಚ ಕೊಡಬೇಡಿ ಎಂದಿದ್ದಾರೆ.

ಇದೇ ತಿಂಗಳು 11ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಿಗಲಿದೆ. ರಾಜ್ಯದಲ್ಲಿ ಎಲ್ಲಿಗೆ ಬೇಕಾದರೂ ಓಡಾಡಬಹುದು. ಆದರೆ ಗಂಡಸರು ಟಿಕೆಟ್ ತೆಗೆದುಕೊಂಡು ಓಡಾಡಬೇಕು. ಯಾಕೆಂದರೆ ಕೆಎಸ್‍ಆರ್‍ಟಿಸಿ ನಡಿಯಬೇಕಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ತಂದಿರುವುದಕ್ಕೆ ನಿಮಗೆ ಈ ಯೋಜನೆಗಳು ಸಿಗುತ್ತಿದೆ. ನಾನು ನಿಮ್ಮ ಉಪಕಾರ ಸ್ಮರಣೆ ನೆನೆಯಲು ಇಲ್ಲಿಗೆ ಬಂದಿದ್ದೇನೆ. ನೀವು ಕಾಂಗ್ರೆಸ್‍ಗೆ ಕೊಟ್ಟ ಶಕ್ತಿ ಸಾರ್ಥಕವಾಗುತ್ತದೆ. ರಾಜ್ಯದ ಇತಿಹಾಸದಲ್ಲೇ ಹೆಚ್ಚು ಅಂತರದಲ್ಲಿ ಗೆಲ್ಲಿಸಿದ್ದೀರಿ ಎಂದಿದ್ದಾರೆ.

Leave a Reply

Your email address will not be published. Required fields are marked *