ಕಳೆದ ಹದಿನೈದು ದಿನಗಳ ಹಿಂದೆ ಕೋತಿ ದಾಳಿಗೊಳಗಾದ 20 ಜನರ ಪೈಕಿ ಎಂಟು ಮಕ್ಕಳೂ ಸೇರಿದ್ದಾರೆ. ಕೋತಿ, ಛಾವಣಿ ಮತ್ತು ಕಿಟಕಿಯ ಸರಳುಗಳ ಮೇಲೆ ಕುಳಿತು ಇದ್ದಕ್ಕಿದ್ದಂತೆ ಜನರ ಮೇಲೆ ಧಾವಿಸುತ್ತದೆ. ಗಾಯಗೊಂಡವರಲ್ಲಿ ಅನೇಕರಿಗೆ ಗಂಭೀರ ಗಾಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

 (Madhya Pradesh) ರಾಜ್‌ಗಢ ಪಟ್ಟಣದಲ್ಲಿ 20 ಜನರ ಮೇಲೆ ದಾಳಿ ನಡೆಸಿ ಭಯ ಹುಟ್ಟಿಸಿದ್ದ ಕೋತಿಯನ್ನು (Most Wanted Monkey) ಬುಧವಾರ ಸೆರೆ ಹಿಡಿಯಲಾಗಿದೆ. ಈ ಕೋತಿಯನ್ನು ಹಿಡಿದವರಿಗೆ ₹ 21,000 ಬಹುಮಾನ ಘೋಷಣೆ ಆಗಿತ್ತು.  ಬುಧವಾರ ಸಂಜೆ, ಉಜ್ಜಯಿನಿಯಿಂದ (Ujjain) ಕರೆಸಲ್ಪಟ್ಟ ರಕ್ಷಣಾ ತಂಡವು ಸ್ಥಳೀಯ ಅಧಿಕಾರಿಗಳು ಅಲ್ಲಿನ ನಿವಾಸಿಗಳೊಂದಿಗೆ ಸೇರಿಕೊಂಡು ರೊಚ್ಚಿಗೆದ್ದಿರುವ ಕೋತಿಯನ್ನು ಹಿಡಿಯಲು ಪ್ರಯತ್ನಿಸಿತು. ಕೋತಿಯನ್ನು ಪತ್ತೆ ಮಾಡಲು ಡ್ರೋನ್ ಬಳಸಿದ ತಂಡ, ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿದಿತ್ತು.  ಅರಣ್ಯ ಇಲಾಖೆ ಸಿಬ್ಬಂದಿ ಶಾಂತವಾದ ಕೋತಿಯನ್ನು ಪ್ರಾಣಿ ರಕ್ಷಣಾ ವಾಹನಕ್ಕೆ ಬಲೆಗೆ ಕೊಂಡೊಯ್ಯುತ್ತಿದ್ದಂತೆ ಜನರ ಗುಂಪೊಂದು ಜೈ ಶ್ರೀ ರಾಮ್ ಮತ್ತು ಜೈ ಬಜರಂಗ ಬಲಿ ಘೋಷಣೆ ಕೂಗಿದ್ದು ಕಂಡು ಬಂತು. ಕೋತಿಗಳ ದಾಳಿಯಿಂದಾಗಿ ಆ ಪ್ರದೇಶದಲ್ಲಿನ ಜನರು ಭಯಭೀತರಾಗಿದ್ದು ವ್ಯಕ್ತಿಯೊಬ್ಬ ತನ್ನ ಮನೆಯ ಟೆರೇಸ್‌ನಲ್ಲಿ ಗನ್ ಹಿಡಿದು ಕಾವಲು ಕಾಯುತ್ತಿರುವುದೂ ಇಲ್ಲಿ ಕಂಡು ಬಂದಿದೆ.

ಕಳೆದ ಹದಿನೈದು ದಿನಗಳ ಹಿಂದೆ ಕೋತಿ ದಾಳಿಗೊಳಗಾದ 20 ಜನರ ಪೈಕಿ ಎಂಟು ಮಕ್ಕಳೂ ಸೇರಿದ್ದಾರೆ. ಕೋತಿ, ಛಾವಣಿ ಮತ್ತು ಕಿಟಕಿಯ ಸರಳುಗಳ ಮೇಲೆ ಕುಳಿತು ಇದ್ದಕ್ಕಿದ್ದಂತೆ ಜನರ ಮೇಲೆ ಧಾವಿಸುತ್ತದೆ. ಗಾಯಗೊಂಡವರಲ್ಲಿ ಅನೇಕರಿಗೆ ಗಂಭೀರ ಗಾಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮಂಗನ ಕೃತ್ಯ ಸೆರೆಯಾಗಿದೆ. ವಯೋವೃದ್ಧರೊಬ್ಬರ ಮೇಲೆ ಎರಗಿದ ಕೋತಿ ಆತನನ್ನು ನೆಲಕ್ಕೆ ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳೂ ಇವೆ. ಈ ದಾಳಿಯಿಂದ ವ್ಯಕ್ತಿಯ ತೊಡೆಯ ಮೇಲೆ ಆಳವಾದ ಗಾಯವುಂಟಾಗಿದೆ.

ಈ ಪುಂಡ ಕೋತಿಯನ್ನು ಹಿಡಿಯಲು ಪುನರಾವರ್ತಿತ ಪ್ರಯತ್ನಗಳು ವಿಫಲವಾದ ನಂತರ, ಸ್ಥಳೀಯ ಅಧಿಕಾರಿಗಳು ₹ 21,000 ನಗದು ಬಹುಮಾನವನ್ನು ಘೋಷಿಸಿದ್ದು, ವಿಶೇಷ ರಕ್ಷಣಾ ತಂಡವನ್ನು ಕರೆಸಿದ್ದರು. ಆ ಕೋತಿಯನ್ನು ಹಿಡಿಯಲು ಪುರಸಭೆಗೆ ಉಪಾಯಗಳಿರಲಿಲ್ಲ . ನಾವು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ್ದೇವೆ.  ಅವರ ಸಹಾಯದಿಂದ ಉಜ್ಜಯಿನಿಯಿಂದ ಅರಣ್ಯ ಇಲಾಖೆಯ ರಕ್ಷಣಾ ತಂಡವನ್ನು ಕರೆಸಿದ್ದೇವೆ. ಪಾಲಿಕೆ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಅವರಿಗೆ ಸಹಾಯ ಮಾಡಿದರು. ಕೋತಿಯನ್ನು ಹಿಡಿಯಲು 4 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ರಾಜ್‌ಗಢ ಪುರಸಭೆಯ ಅಧ್ಯಕ್ಷ ವಿನೋದ್ ಸಾಹು ತಿಳಿಸಿದ್ದಾರೆ. ಕೋತಿಯನ್ನು ಹಿಡಿದಿದ್ದಕ್ಕೆ ₹ 21 ಸಾವಿರ ನಗದು ಬಹುಮಾನ ನೀಡುವುದಾಗಿ ಹೇಳಿದ್ದೆವು. ಈಗ ಅದನ್ನು ಪ್ರಾಣಿ ರಕ್ಷಣಾ ತಂಡಕ್ಕೆ ನೀಡುತ್ತೇವೆ ಎಂದರು.

ರಾಜ್‌ಗಢ್‌ನಲ್ಲಿ ಸ್ಥಳೀಯ ತಂಡ ಕಳೆದ ಎರಡು ವಾರಗಳಿಂದ ಕೋತಿಯನ್ನು ಹಿಡಿಯಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ ಎಂದು ಅರಣ್ಯಾಧಿಕಾರಿ ಗೌರವ್ ಗುಪ್ತಾ ಹೇಳಿದ್ದಾರೆ. ನಾವು ಹಲವಾರು ಜಿಲ್ಲೆಗಳಲ್ಲಿ ವಿಶೇಷ ತಂಡಗಳನ್ನು ಸಂಪರ್ಕಿಸಿದ್ದೇವೆ. ಉಜ್ಜಯಿನಿ ತಂಡವು ಲಭ್ಯವಾದ ತಕ್ಷಣ ಅವರು ರಾಜ್‌ಗಢಕ್ಕೆ ಧಾವಿಸಿದ್ದು, ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ಕೋತಿಯನ್ನು ಹಿಡಿದಿದ್ದೇವೆ ಎಂದಿದ್ದಾರೆ ಗುಪ್ತಾ.

ಸೆರೆಹಿಡಿಯಲಾದ ಕೋತಿಯನ್ನು ಎಲ್ಲಿ ಬಿಡಲಾಗುತ್ತದೆ ಎಂದು ಕೇಳಿದಾಗ ಬಹುಶಃ ಅದನ್ನು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ. ಇದರಿಂದ ಅದು ಜನರಿಗೆ ಹಾನಿಯಾಗುವುದಿಲ್ಲ ಎಂದು ಗುಪ್ತಾ ಹೇಳಿದ್ದಾರೆ.

Leave a Reply

Your email address will not be published. Required fields are marked *