
Death sentence: ಐವರ ಕೊಂದ ಹಂತಕನಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ಮೂವರು ಮಕ್ಕಳು ಸೇರಿ ಐವರನ್ನು ಕೊಂದ ಅಪರಾಧಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ನ ಹೈಕೋರ್ಟ್ನ ಧಾರವಾಡದ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ತನ್ನ ಮೂವರು ಮಕ್ಕಳು ಸೇರಿ ಐವರನ್ನು ಕೊಂದ ವ್ಯಕ್ತಿಗೆ ಮರಣ ದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ನ ಧಾರವಾಡದ ವಿಭಾಗೀಯ ಪೀಠವು ಎತ್ತಿ ಹಿಡಿದಿದೆ.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ 3 ಮಕ್ಕಳು ಸೇರಿದಂತೆ ಐದು ಸಾವಿಗೆ ಕಾರಣವಾಗಿ ಕ್ರೌರ್ಯ ಮೆರೆದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ನೀಡುವುದೇ ಅಂತಿಮ ಆಯ್ಕೆಯಾಗಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಜಿ ಬಸವರಾಜ ಅವರಿದ್ದ ಪೀಠ ತೀರ್ಪಿನಲ್ಲಿ ಹೇಳಿದೆ.
2017 ರಲ್ಲಿ ನಡೆದ ಕೊಲೆ ಐವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ತಿಪ್ಪಯ್ಯಗೆ ಬಳ್ಳಾರಿಯ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಇದರ ವಿರುದ್ಧ ಹಂತಕ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. 2022 ರಲ್ಲಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ಧಾರವಾಡ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿತ್ತು. ಇದೀಗ ತೀರ್ಪು ನೀಡಿದ್ದು, ಕೊಲೆ ಪಾತಕಿಗೆ ಗಲ್ಲು ಶಿಕ್ಷೆಯೇ ಅಂತಿಮ ಶಿಕ್ಷೆ ಎಂದು ಹೇಳಿದೆ.
ಹಂತಕನ ಕ್ರೌರ್ಯ ಆಘಾತ ಉಂಟು ಮಾಡಿದೆ. ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳ ಮೇಲೆ ಭೀಕರತೆ ಮೆರೆದಿರುವುದು ಸಾಬೀತಾಗಿದೆ. ಐವರನ್ನೂ ಕತ್ತರಿಸಿ ಕೊಂದಿದ್ದಾನೆ. ಅಲ್ಲದೇ, ಓರ್ವ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಮಹಿಳೆಯನ್ನು ಕತ್ತರಿಸಿದ ರೀತಿ ಯಾರೊಬ್ಬರ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುತ್ತದೆ. ಇದಕ್ಕೂ ಮೊದಲು ಇಂತಹ ಹಲವು ಕೊಲೆ ಪ್ರಕರಣಗಳನ್ನು ನೋಡಿದ್ದೇವೆ. ಆದರೆ, ಇದು ಅತಿ ಭೀಕರವಾಗಿದೆ. ಆತ್ಮಸಾಕ್ಷಿಯನ್ನೇ ಆಘಾತಗೊಳಿಸಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಅಪರಾಧಿಗೆ ನೀಡಲಾದ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದ ಹೈಕೋರ್ಟ್, ಹತ್ಯಾಕಾಂಡದಲ್ಲಿ ಬದುಕುಳಿದ ಏಕೈಕ ಮಗುವಾದ ರಾಜೇಶ್ವರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಅಲ್ಲದೇ, ಮಗುವಿನ ಪೋಷಣೆ, ಭವಿಷ್ಯದ ಬಗ್ಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸುವಂತೆ ಹೆಚ್ಚುವರಿ ರಿಜಿಸ್ಟ್ರಾರ್ಗೆ ಪೀಠ ನಿರ್ದೇಶನ ನೀಡಿತು.
ಜೈಲಿನಲ್ಲಿರುವ ಆರೋಪಿಯ ನಡವಳಿಕೆ, ಮಾನಸಿಕ ಮತ್ತು ಶಾರೀರಿಕ ದೃಢತೆ, ಕುಟುಂಬದ ಹಿನ್ನೆಲೆ, ಒಡಹುಟ್ಟಿದವರೊಂದಿಗಿನ ಸಂಬಂಧ, ಹಿಂಸೆ ಅಥವಾ ನಿರ್ಲಕ್ಷ್ಯದ ಇತಿಹಾಸ, ಪೋಷಕರ ಅಭಿಪ್ರಾಯ, ಕುಟುಂಬ ಸದಸ್ಯರೊಂದಿಗಿನ ಸಂಬಂಧ, ಶೈಕ್ಷಣಿಕ ಹಿನ್ನೆಲೆಯ ವರದಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಜಿ ಬಸವರಾಜ ಅವರಿದ್ದ ಪೀಠ ತೀರ್ಪಿನಲ್ಲಿ ನೀಡಿದೆ.
ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕೆಂಚನಗುಡ್ಡ ಗ್ರಾಮದ ಕೂಲಿ ಕಾರ್ಮಿಕನಾಗಿದ್ದ ಬೈಲೂರು ತಿಪ್ಪಯ್ಯ ಎಂಬಾತ 12 ವರ್ಷಗಳಿಂದ ತನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಜಗಳವಾಡುತ್ತಿದ್ದ. ದಂಪತಿಗೆ ನಾಲ್ಕು ಮಕ್ಕಳಿದ್ದು, ಇದರಲ್ಲಿ ತನಗೆ ಒಬ್ಬರು ಮಾತ್ರ ಜನಿಸಿದ್ದಾರೆ ಎಂದು ವಾದಿಸುತ್ತಿದ್ದ. ಇದೇ ಕೋಪದಲ್ಲಿ 2017ರ ಫೆಬ್ರವರಿ 25ರಂದು ಪತ್ನಿ ಪಕ್ಕೀರಮ್ಮ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದ. ಬಳಿಕ ತನ್ನ ಅನುಮಾನಿಸಿದ್ದ ಮೂವರು ಮಕ್ಕಳನ್ನೂ ಕೊಚ್ಚಿ ಕೊಂದಿದ್ದ.
ತಡೆಯಲು ಬಂದಿದ್ದ ಅತ್ತಿಗೆ ಗಂಗಮ್ಮರ ಮೇಲೂ ಹಲ್ಲೆ ಮಾಡಿದ್ದ. ಈತನ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಬಳ್ಳಾರಿಯ ಸೆಷನ್ಸ್ ನ್ಯಾಯಾಲಯ 36 ಸಾಕ್ಷಿ, 51 ಇತರ ಸಾಕ್ಷಿಗಳನ್ನು ಪರಿಗಣಿಸಿ ದೋಷಿ ಎಂದು ಘೋಷಿಸಿತ್ತು. ಅಲ್ಲದೇ, ಡಿಸೆಂಬರ್ 3, 2019 ರಂದು ಐಪಿಸಿಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಟ್ರಯಲ್ ಕೋರ್ಟ್ ವಿಧಿಸಿದ ಶಿಕ್ಷೆಯ ವಿರುದ್ಧ ತಿಪ್ಪಯ್ಯ ಹೈಕೋರ್ಟ್ ಮೊರೆ ಹೋಗಿದ್ದರೆ, ಪ್ರಾಸಿಕ್ಯೂಷನ್ ಮರಣದಂಡನೆ ವಿಧಿಸಿದ್ದರ ಪರವಾಗಿ ಅರ್ಜಿ ಸಲ್ಲಿಸಿತ್ತು.
2022ರ ನವೆಂಬರ್ 22 ರಂದು ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆ ಮತ್ತು ವರದಿ ಸೇರಿದಂತೆ ಹಲವು ಮಾಹಿತಿಗಳನ್ನು ಅದು ಕೋರಿತ್ತು. ಇದೀಗ ಅಪರಾಧಿಗೆ ನೀಡಿದ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದು ಆದೇಶಿಸಿದೆ.